ಜಗಳೂರು: ಮುಂದಿನ ಮೂರು ತಿಂಗಳುಗಳು ಭಾರೀ ಬಿಸಿಲಿನ ಕಾಲ. ಭೂಮಿ ಬಿಸಿ ಆಗುತ್ತಿದೆ. ಕೆರೆ ಕಟ್ಟೆಗಳು ಒಣಗುತ್ತಿವೆ. ಮರಗಳು ಒಣಗಿ ಹೋಗುತ್ತವೆ. ಆಹಾರ ಮತ್ತು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಜಗಳೂರು ತಾಲೂಕಿನ ರಂಗಯ್ಯನದುರ್ಗ ಅರಣ್ಯದಲ್ಲಿರುವ ಏಷ್ಯಾದಲ್ಲಿ ಅತ್ಯಂತ ಪ್ರಸಿದ್ದ ಮತ್ತು ಅಪರೂಪದ ಕೊಂಡುಕುರಿ ವನ್ಯಜೀವಿ ಸಂತತಿ ಸಂರಕ್ಷಣೆ ಮಾಡಬೇಕು ಮತ್ತು ಪ್ರವಾಸಿತಾಣವಾಗಿಸಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಮಾಲತೇಶ್ ಅರಸ್ ಸರ್ಕಾರಕ್ಕೆ ಆಗ್ರಹಿಸಿದರು.
ಜಗಳೂರು ನಗರದ ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಏಷ್ಯಾ ಖಂಡದಲ್ಲೇ ಅಳಿವಿನಂಚಿನಲ್ಲಿರುವ ಅಪರೂಪದ ವನ್ಯಜೀವಿ ಕೊಂಡುಕುರಿ, ಗಂಡು ಕೊಂಡುಕುರಿಗೆ ನಾಲ್ಕು ಕೊಂಬುಗಳಿದ್ದು ನೋಡಲು ಅತ್ಯಾಕರ್ಷಕವಾಗಿದೆ. ಜಿಂಕೆಯಷ್ಟೇ ಸೂಕ್ಷ್ಮ, ನಾಚಿಕೆ ಸ್ವಭಾವದ ಪ್ರಾಣಿ. ಕುರುಚಲು ಅರಣ್ಯ ‘ಇದರ ವಾಸಸ್ಥಳ, ವಿಶ್ವದ ಅತಿ ವಿನಾಶದ ಪ್ರಾಣಿಗಳ ಜತೆ ಕೊಂಡುಕುರಿಯನ್ನು ಸೇರಿಸಿರುವುದು ಇದರ ಸಂರಕ್ಷಣೆ ಮಹತ್ವವನ್ನು ಸಾರುತ್ತದೆ. ಕೊಂಡುಕುರಿ ವನ್ಯಜೀವಿಧಾಮ ನೋಡಿಕೊಂಡು ಹೋಗಲು ಪ್ರವಾಸಿ ತಾಣದ ಮಾಹಿತಿ ಕೇಂದ್ರ ತೆರೆಯಲು ಸಚಿವರ ಗಮನಕ್ಕೆ ತರಲಾಗುವುದು. ಕೇಂದ್ರ ಆರಂಭವಾದರೆ ವಿಜ್ಞಾನಿಗಳ, ಯುವಸಮೂಹದವರ ಸಂಶೋಧನೆಗೂ ಸಹಕಾರಿಯಾಗುತ್ತದೆ ಎಂದರು.
ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ
ನಮ್ಮ ನಮ್ಮ ಮನೆಯ ಮುಂದೆ ಒಂದು ಚಿಕ್ಕ ಪಾತ್ರೆಯಲ್ಲಿ ನೀರು ಇಡೋಣ. ಅಕ್ಕಿ ಅಥವಾ ಆಹಾರ ಕಣಗಳನ್ನು ಹಾಕಿ. ಆ ಒಂದು ಪಾತ್ರೆ ನೀರು ಒಂದು ಪಕ್ಷಿಯ ಜೀವ ಉಳಿಸಬಹುದು. ಆ ಸ್ವಲ್ಪ ಆಹಾರ ಒಂದು ಪ್ರಾಣಿಗೆ ಬದುಕುವ ಆಸೆ ಕೊಡಬಹುದು.ರಾಜ್ಯಾದ್ಯಂತ ಇಂತಹ ಪರಿಸರ, ವನ್ಯಜೀವಿ ಕಾಳಜಿಯ ಹತ್ತಾರು ಅಭಿಯಾನ ಸ್ಥಳೀಯರ ಸಹಕಾರದಿಂದ ಮಾಡುತ್ತಿದ್ದೇವೆ ಎಂದರು.
ದಾರಿದೀಪ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಎಸ್. ಸುಜಾತ ಮಾತನಾಡಿ. ಮಹಿಳೆಯರು ಮನಸು ಮಾಡದರೇ ಮನೆಯ ಮಕ್ಕಳ ಜೊತೆ ಪಕ್ಷಿಗಳನ್ನು ನಮ್ಮ ಮಕ್ಕಳೆಂದು ಬಾವಿಸಬೇಕು, ನಮ್ಮ ಮನೆಯ ಮುಂದೆ ಒಂದು ಚಿಕ್ಕ ಪಾತ್ರೆಯಲ್ಲಿ ನೀರು ಇಡೋಣ. ದವಸ ಧಾನ್ಯಗಳನ್ನು ಹಾಕೋಣ, ಜಗಳೂರು ನಗರದ ಕೆಲವು ಭಾಗದಲ್ಲಿ ಸಿಮೆಂಟ್ ತೊಟ್ಟಿಗಳನ್ನು ಇಡುತ್ತೇವೆ. ಆ ಒಂದು ತೊಟ್ಟಿಗೆ ಯಾರುಬೇಕಾದರೂ ನೀರು ಹಾಕಬಹುದು. ಬಿಸಿಲಿನಲ್ಲಿ ಬಳಲುವ ಪಕ್ಷಿಗಳ ಜೀವ ಉಳಿಸಬಹುದು. ಮುಂದೆ ಮಳೆಗಾಲದಲ್ಲಿ ಗಿಡನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಅರಣ್ಯ ಇಲಾಖೆಯ ಸಹಕಾರ ಪಡೆದು ಸಸಿ ಪಡೆಯಲಾಗುವುದು, ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಗಿಡ ನೆಡುವ ಕಾರ್ಯ ಮಾಡುತ್ತೇವೆ ಎಂದರು.
ಕರ್ನಾಟಕ ಪೊಟೋಗ್ರಾಫರ್ ಮತ್ತು ವೀಡಿಯೋ ಗ್ರಾಫರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾದ ಮನು ಎಂ.ದೇವನಗರಿ ಮಾತನಾಡಿ, ಹಿಂದೆ ಇದ್ದ ಹಣ್ಣಿನ ಮರಗಳು, ಈಗ ಇಲ್ಲ. ಸಣ್ಣ ಕಾಡುಗಳು, ಹಸಿರು ಪ್ರದೇಶಗಳು ಇದ್ದ ಜಾಗಗಳಲ್ಲಿ ಇಂದು ಲೇಔಟ್ಗಳು, ರಿಯಲ್ ಎಸ್ಟೇಟ್ ಯೋಜನೆಗಳು ಹೆಚ್ಚಾಗಿ, ಹಣದ ಹಿಂದೆ ಓಡುವ ಜನರಲ್ಲಿ ಮಾನವೀಯತೆಯ ಕೊರತೆ ಮಾತ್ರ ಕಾಣುತ್ತಿದೆ. ಅಲ್ಲಿ ಬದುಕುತ್ತಿದ್ದ ಸಾವಿರಾರು ಜೀವಿಗಳಿಗೆ ಈಗ ಆಶ್ರಯವೂ ಇಲ್ಲ, ಆಹಾರವೂ ಇಲ್ಲ, ನೀರಿಗೂ ತೀವ್ರ ತೊಂದರೆ ನಾವು ಪ್ರಾಣಿಗಳ ಮೇಲೆ ದಯೆ ಇಡೋಣ. ಮಾನವ -ವನ್ಯಜೀವಿ ಸಂಘರ್ಷ ಹೆಚ್ಚುತ್ತಿದೆ. ಇವುಗಳಿಗೆ ಈ ಬೇಸಿಗೆ ಬದುಕಿನ ಹೋರಾಟವಾಗುತ್ತಿದೆ. ಎಲ್ಲರೂ ನೀರುಣಿಸೋಣ
ಈ ಬೇಸಿಗೆಯಲ್ಲಿ ಮನುಷ್ಯತ್ವವನ್ನು ಮರೆಯಬೇಡಿ. ಮುಂದಿನ ಮೂರು ತಿಂಗಳುಗಳು ದಯವಿಟ್ಟು ಪಕ್ಷಿಗಳು ಮತ್ತು ಪ್ರಾಣಿಗಳಿಗಾಗಿ ನೀರು ಮತ್ತು ಆಹಾರ ಇಡಿ. ನಮ್ಮ ಸಣ್ಣ ಕರುಣೆ ಅವರಿಗೆ ಒಂದು ದೊಡ್ಡ ಜೀವದಾನ ವಾಗಬಹುದು. ಅರಣ್ಯ ಇಲಾಖೆಯ ಜೊತೆಯಾಗಿ ನಿಲ್ಲೋಣ. ನಾವೂ ಒಂದು ಕಾಯಕ ಮಾಡೋಣ ಎಂದರು.
ಸುದ್ದಿಗೋಷ್ಟಿಯಲ್ಲಿ, ದಾರಿದೀಪ ಸೇವಾ ಟ್ರಸ್ಟ್ ಗೌರವಾಧ್ಯಕ್ಷರಾದ ಜಯನ್, ಪ್ರಧಾನ ಕಾರ್ಯದರ್ಶಿ ಎಸ್. ನೇತ್ರಾವತಿ, ಸಂಘಟನಾ ಕಾರ್ಯದರ್ಶಿ ವೈ.ಜಿ. ಉಮಾದೇವಿ, ಖಜಾಂಚಿ ಎನ್.ಬಿ. ಗಾಯತ್ರಿ, ಸಂಚಾಲಕರಾದ ಚೌಡಪ್ಪ, ನಿರ್ದೇಶಕರಾದ ಎಸ್.ಜಿ. ರಾಜಪ್ಪ,, ಪೊಟೋ ಗ್ರಾಫರ್ ಅಸೋಸಿಯೇಷನ್ ನ ಪ್ರಾದಾನ ಕಾರ್ಯದರ್ಶಿ ದೇವೇಂದ್ರಪ್ಪ ಕುಮಾರ್ ಮತ್ತು ಇತರರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.