January 29, 2026
IMG-20260113-WA0299.jpg

ನಾಯಕನಹಟ್ಟಿ:
ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲೇಬೋರನಹಟ್ಟಿ ಗ್ರಾಮದಲ್ಲಿ ಶ್ರೀ ಒಡಲೇಶ್ವರ ಸ್ವಾಮಿ ಹಾಗೂ ಅಕ್ಕ ರಾಯಮ್ಮ (ಪೆದ್ದಕ್ಕರಾಲು ದೇವಿ) ಜಾತ್ರಾ ಮಹೋತ್ಸವವು ಭಕ್ತಿಭಾವ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಅದ್ದೂರಿಯಾಗಿ ನೆರವೇರಿತು.

ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರದಂದು ಗಂಗಾ ಪೂಜೆಯ ಅಂಗವಾಗಿ ಭಕ್ತರು ಜಿನಗಿ ಹಳ್ಳಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ರಾತ್ರಿ ಅಬ್ಬೇನಹಳ್ಳಿ ಗ್ರಾಮದ ರಾಮಜ್ಜಗಳ ತೋಟದಲ್ಲಿ ವಾಸ್ತವ್ಯ ಮಾಡಲಾಯಿತು. ಈ ವೇಳೆ ಮೀಸಲು ಮಹಾಪೂಜೆ ಹಾಗೂ ಪೆದ್ದಕ್ಕರಾಲು ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಜಾತ್ರೆಯ ಅಂಗವಾಗಿ ದುಶ್ಯಾಸನ ವಧೆ ಅರ್ಥಾತ್ ದ್ರೌಪದಿಯ ವಸ್ತ್ರಾಪಹರಣ ಯಕ್ಷಗಾನ ನಾಟಕ ಪ್ರದರ್ಶನಗೊಂಡು ಭಕ್ತರ ಮನಸೂರೆಗೊಂಡಿತು.
ಮಂಗಳವಾರ ಬೆಳಿಗ್ಗೆ ಗದ್ದಿಗೆ ಕಾಸು ಮೀಸಲು ಪೂಜೆ ನಡೆಯಿತು. ಬುಡಕಟ್ಟು ಸಂಸ್ಕೃತಿ ಹಾಗೂ ಸಂಪ್ರದಾಯದಂತೆ ದೇವರ ಎತ್ತುಗಳ ಹರಿವು ಕಾರ್ಯಕ್ರಮ ಜರುಗಿತು. ದೇವರ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಪಾಪೇಶ್ ನಾಯಕ, ಆಧುನಿಕತೆಯ ಅರ್ಭಟದಲ್ಲಿ ನಶಿಸುತ್ತಿರುವ ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು. ಮ್ಯಾಸನಾಯಕ ಸಮುದಾಯದ ಸಂಸ್ಕೃತಿ ಜೀವನಸತ್ವದಿಂದ ಕೂಡಿದ್ದು, ಅಮೂಲ್ಯ ಕಲೆ–ಸಂಸ್ಕೃತಿಗಳನ್ನು ಒಳಗೊಂಡಿರುವ ಬುಡಕಟ್ಟು ಸಂಸ್ಕೃತಿಯೇ ನಿಜವಾದ ಭಾರತೀಯ ಸಂಸ್ಕೃತಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಸಂಸ್ಕೃತಿಯನ್ನು ಸಂರಕ್ಷಿಸಿ ಉನ್ನತಿಗೊಳಿಸಲು ಸರ್ಕಾರ ಮುಂದಾಗಬೇಕು ಎಂದರು. ಬುಡಕಟ್ಟು ಜನರು ಪ್ರಕೃತಿಯೊಂದಿಗೆ ಬೆಸೆದುಕೊಂಡ ಬದುಕಿನ ಮೂಲಕ ಕಲೆಗಳನ್ನು ಆರಾಧಿಸಿ ತಮ್ಮ ನೋವು–ನಲಿವುಗಳನ್ನು ಹಂಚಿಕೊಳ್ಳುತ್ತಿದ್ದರೆಂದು ಅವರು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ (ಎತ್ತಿನಹಟ್ಟಿ ಗೌಡ್ರು), ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎಚ್.ಓ. ಮಂಜುನಾಥ್, ತಾಲೂಕು ಪಂಚಾಯತಿ ಮಾಜಿ ಸದಸ್ಯ ಎಸ್.ಪಿ. ಪಾಲಯ್ಯ, ಡಿ.ಓ. ಕಾಕಸೂರಯ್ಯ, ಬಿಜೆಪಿ ಮುಖಂಡ ಡಿ.ಎಚ್. ಪರಮೇಶ್ವರಪ್ಪ, ಎಂ.ಪಿ. ಪಾಲಯ್ಯ, ಕೆ. ಕರಿಯಣ್ಣ, ಎಚ್.ವಿ. ಪ್ರಕಾಶ್, ಮಲ್ಲೂರಹಳ್ಳಿ ಹುಚ್ಚ ಮಲ್ಲಯ್ಯ, ಬಡಗಿ ತಿಪ್ಪೇಸ್ವಾಮಿ, ಎಚ್.ಪಿ. ತಿಪ್ಪೇಸ್ವಾಮಿ, ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಬಿ. ಶಂಕರ್ ಸ್ವಾಮಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದಲ್ಲದೆ ದೇವರಿಗೆ ಸೇರಿದ ಅಣ್ಣ–ತಮ್ಮಂದಿರಾದ **ಚಿಕ್ಕಗೊಂಡನಹಳ್ಳಿ, ಚನ್ನಬಸಯ್ಯನಹಟ್ಟಿ, ಗಡಿಮಾಕುಂಟೆ, ಎಕ್ಕಗೊಂದಿ ಓಬಯ್ಯನಹಟ್ಟಿ, ಸಿಡೇಗಲ್, ಮಾದಯ್ಯನಹಟ್ಟಿ, ಕಾವಲು ಬಸವೇಶ್ವರನಗರ, ನಾಯಕನಹಟ್ಟಿ, ನಿಂಗಾವರಹಟ್ಟಿ, ಮಲ್ಲೂರಹಳ್ಳಿ, ಮ್ಯಾಸರಹಟ್ಟಿ, ಮುಷ್ಟಲಗುಮ್ಮಿ, ಮಲೇಬೋರನಹಟ್ಟಿ, ತುಮಕೂರ್ಲಹಳ್ಳಿ, ಮುತ್ತಯ್ಯನಹಟ್ಟಿ, ರಾಯದುರ್ಗ, ದೊಡ್ಡಟ್ಟಿ, ಅಬ್ಬೇನಹಳ್ಳಿ, ಹಳೂರು ಹಾಗೂ ದಾವಣಗೆರೆ–ಚಿತ್ರದುರ್ಗ ಜಿಲ್ಲೆಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಜಾತ್ರಾ ಮಹೋತ್ಸವವು ಶಾಂತಿ, ಸೌಹಾರ್ದತೆ ಹಾಗೂ ಸಂಪ್ರದಾಯದ ಘನತೆಯೊಂದಿಗೆ ಯಶಸ್ವಿಯಾಗಿ ಸಂಪನ್ನವಾಯಿತು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading