
ಹಿರಿಯೂರು :
ಕಲಿಯೋಕೆ ಕೋಟಿ ಭಾಷೆ ಇದ್ದರೂ, ಆಡೋಕೆ ಒಂದೇ ಭಾಷೆ. ಅದೇ ಕನ್ನಡ. ಕನ್ನಡ ಭಾಷೆ ತಾಯಿಗೆ ಸಮಾನವಾದದ್ದು. ಕನ್ನಡ ಭಾಷೆ, ಸಂಸ್ಕೃತಿ ನೆಲ-ಜಲವನ್ನು ಉಳಿಸಿ, ಬೆಳೆಸುವ ಕರ್ತವ್ಯ ಪ್ರತಿಯೊಬ್ಬ ಕನ್ನಡಿಗದಾಗಿದೆ ಎಂಬುದಾಗಿ ತಾಲ್ಲೂಕು ದೈಹಿಕ ಶಿಕ್ಷಣ ನಿರ್ದೇಶಕರಾದ ರವೀಂದ್ರನಾಯಕ್ ಅವರು ಹೇಳಿದರು.
ತಾಲ್ಲೂಕಿನ ಯಲ್ಲದಕೆರೆ ಗ್ರಾಮದ ಶ್ರೀಜ್ಞಾನಜ್ಯೋತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ “ಕನ್ನಡ ಪ್ರಜ್ಞೆ-ಜಾಗೃತಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆಯ ಮುಖ್ಯಸ್ಥರಾದ ಬಿ.ಜಿ.ಮನೋಹರ್ ಮಾತನಾಡಿ ಕನ್ನಡದ ಏಕೀಕರಣ ಹಾಗೂ ಸ್ವತಂತ್ರ ಹೋರಾಟದಲ್ಲಿ ಕನ್ನಡಿಗರ ತ್ಯಾಗ ಬಲಿದಾನವನ್ನು ಕನ್ನಡಿಗರಾದ ನಾವು ಸ್ಮರಿಸಿಕೊಳ್ಳಬೇಕಿದೆ ಎಂಬುದಾಗಿ ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಆರ್.ಬಿ.ಸುರೇಶ್ ಮಾತನಾಡಿ, ಕನ್ನಡದ ಇತಿಹಾಸ, ಕನ್ನಡ ನಾಡು-ನುಡಿ, ಭಾಷೆ ಕಲೆಗಾಗಿ ದುಡಿದ ಮಹನೀಯರ ಸಾಧನೆಗಳನ್ನು ಇಂದಿನ ಯುವಜನತೆ ತಿಳಿದುಕೊಂಡಾಗ ಮಾತ್ರ ಕನ್ನಡದ ಬಗ್ಗೆ ಅಭಿಮಾನ ಗೌರವ ಬೆಳೆಯಲು ಸಾಧ್ಯ ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಯಲ್ಲದಕೆರೆ ಸ್ವತಂತ್ರ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಮಂಜುನಾಥ್ ವಿಶ್ವಮಟ್ಟದಲ್ಲಿ ಕನ್ನಡಿಗರ ಸಾಧನೆ ಕುರಿತು ಮಕ್ಕಳಿಗೆ ಉಪನ್ಯಾಸ ನೀಡಿದರು. ಆರಂಭದಲ್ಲಿ ಶಿಕ್ಷಕ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ನಾಗವೇಣಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಂಗಸ್ವಾಮಿ, ಟಿ.ರಂಗಸ್ವಾಮಿ, ಶಿಕ್ಷಕಿ ಶ್ರೀಮತಿ ವಿ.ಸೌಮ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




About The Author
Discover more from JANADHWANI NEWS
Subscribe to get the latest posts sent to your email.