ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಸಂದರ್ಭದಲ್ಲಿ ತಮ್ಮ ಮನೆಗಳಿಗೆ ಬರುವ ಗಣತಿದಾರರಿಗೆ ಸಮಸ್ತ ಒಕ್ಕಲಿಗ ಸಮುದಾಯದವರು ಜಾತಿಯ “ಕಾಲಂ” ನಲ್ಲಿ
“ಒಕ್ಕಲಿಗ” ಎಂದು ಬರೆಸಬೇಕೆಂದು ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕು ವಿಶ್ವ ಒಕ್ಕಲಿಗರ ಸಂಘದ ಅಧ್ಯಕ್ಷ ಕುಪ್ಪಹಳ್ಳಿ ಸೋಮಶೇಖರ್ ಮನವಿ ಮಾಡಿದರು.
ಅವರು ಸಾಲಿಗ್ರಾಮ ಪಟ್ಟಣದ ಸಂಘದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ಒಂದು ಮಹತ್ವದ ಸಮೀಕ್ಷೆಯಲ್ಲಿ ಒಕ್ಕಲಿಗ ಸಮಾಜದವರು ಹೊರಗೆ ಉಳಿಯದೆ ಸಮೀಕ್ಷೆಯಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುವ ಮೂಲಕ ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಜನಸಂಖ್ಯೆಯು ಎಷ್ಟಿದೆ ಎಂಬುದನ್ನು ತಿಳಿಯಲು ಅನುಕೂಲವಾಗುವಂತೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ತಮ್ಮ ಮನೆಗೆ ಬಂದು ಗಣತಿದಾರರು ಮಾಹಿತಿಯನ್ನು ಪಡೆಯುವ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ಯಾವುದೇ ಉಪ ಪಂಗಡ, ಉಪಜಾತಿಗಳಾಗಿದ್ದರು ಕೂಡ ಅದನ್ನು ಜಾತಿಯ ಕಾಲಂ ನಲ್ಲಿ ಬರೆಸಬಾರದು ಅಲ್ಲಿಗೆ “ಒಕ್ಕಲಿಗ” ಎಂದೇ ಬರೆಸಬೇಕು ಜೊತೆಗೆ ಪ್ರತಿ ಮನೆಯ ಸರ್ವ ಸದಸ್ಯರ ನಿಖರವಾದ ಮಾಹಿತಿಯನ್ನು ನೀಡಬೇಕು ಎಂದರು.
ಈ ಸಮೀಕ್ಷೆಯ ಬಗ್ಗೆ ಒಕ್ಕಲಿಗ ಸಮುದಾಯದ ಸಂಘಟನೆಗಳವರು, ಜನಪ್ರತಿನಿಧಿಗಳು, ಮುಖಂಡರುಗಳು, ಯುವಕರು, ನೌಕರರು, ಮಹಿಳೆಯರು ಸಮುದಾಯದ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಾಲಿಗ್ರಾಮ ತಾಲೂಕು ವಿಶ್ವ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಸಾ.ರಾ.ಗುರುಪ್ರಸಾದ್, ಖಜಾಂಚಿ ಎಸ್.ಆರ್.ನಾಗೇಶ್, ಸಹಕಾರ್ಯದರ್ಶಿ ಟ್ರಾಕ್ಟರ್ ಅನಂತ, ಮುಖಂಡರಾದ ಎಸ್.ಬಿ.ಕುಮಾರ, ಮಟನ್ ಮಹದೇವ್, ಎಸ್.ಆರ್.ಮಂಜು, ಗಾರೆಮಹದೇವ್ ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.