
ಕೊಪ್ಪಳ ಜುಲೈ 11
ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಯೂರಿಯಾ ಗೊಬ್ಬರ ಕಳೆದ ಭಾರಿಗಿಂತ ಹೆಚ್ಚು ಸರಬರಾಜು ಆಗಿದ್ದು ಇನ್ನೂ ಜಿಲ್ಲೆಯಲ್ಲಿ ಯಾರಾದರೂ ಅನಧಿಕೃತವಾಗಿ ಸ್ಟಾಕ್ ಇಟ್ಟಿದ್ದು ಕಂಡು ಬಂದರೆ ಅಂತಹವರ ವಿರುದ್ದ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ಅವರ ಅಂಗಡಿಗಳ ಲೈಸೆನ್ಸಗಳನ್ನು ರದ್ದು ಪಡಿಸಬೇಕೆಂದು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಅವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿಯ ವಿಡಿಯೋ ಕಾನ್ಪರೇನ್ಸ್ ಹಾಲನಲ್ಲಿ ಕೊಪ್ಪಳ ಜಿಲ್ಲೆಯ ಬೆಳೆ ಸಮೀಕ್ಷೆ ಹಾಗೂ ಬೆಳೆವಿಮೆ ಪ್ರಗತಿ ಪರಿಶೀಲನೆ ಕುರಿತು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಎಸ್.ಬಿ.ಐ ಲೀಡಬ್ಯಾಂಕ್ ಮ್ಯಾನೇಜರ್, ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಶಿಲ್ದಾರರು, ಸಹಾಯಕ ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಅಧಿಕಾರಿಗಳು, ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳು, ಗ್ರಾಮ ಒನ್ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳ ಪ್ರತಿನಿಧಿಗಳೊಂದಿಗೆ ಗೂಗಲ್ ಮೀಟ್ ಮುಖಾಂತರ ವಿಡಿಯೋ ಸಂವಾದ ನಡೆಸಿ ಮಾತನಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಕೃಷಿ ಅಧಿಕಾರಿಗಳು ಹಾಗೂ ವಿಜಿಲೆನ್ಸ್ ಟೀಂ ನವರು ಹೆಚ್ಚು ಕ್ರೀಯಾತ್ಮಕವಾಗಿ ಕೆಲಸ ಮಾಡಬೇಕು. ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಕಳೆದ ವರ್ಷ 86 ಸಾವಿರ ರೈತರು ಮಾಡಿಸಿದ್ದು, ಈ ಸಲ ಮಳೆ ಕಡಿಮೆ ಆಗಿರುವುದರಿಂದ ಹೆಚ್ಚಿನ ರೈತರು ಬೆಳೆ ವಿಮೆ ಮಾಡಿಸಲು ಅವರಿಗೆ ಮಾಹಿತಿ ನೀಡಬೇಕು. ಬೆಳೆ ಸಮೀಕ್ಷೆ ಕಾರ್ಯವನ್ನು ಆದಷ್ಟು ಬೇಗನೆ ಜಿಲ್ಲೆಯಲ್ಲಿ ಮಾಡಿಮುಗಿಸಬೇಕೆಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೆಶಕರಾದ ರುದ್ರೇಶಪ್ಪ ಟಿ ಅವರು ಮಾತನಾಡಿ ಕಳೆದ ವರ್ಷ 16445 ಮೆಟ್ರಿಕ್ ಟನ್ ರಸಗೊಬ್ಬರ ವಿತರಣೆ ಮಾಡಲಾಗಿತ್ತು ಈ ವರ್ಷ 19799 ಮೆಟ್ರಿಕ್ ಟನ್ ರಸಗೊಬ್ಬರ ವಿತರಣೆ ಮಾಡಲಾಗಿದ್ದು, ಇನ್ನೂ 9 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಸ್ಟಾಕ್ ಇದ್ದು ಜಿಲ್ಲೆಯಲ್ಲಿ ಯಾವುದೇ ರಸಗೊಬ್ಬರದ ಕೊರತೆ ಇಲ್ಲ. ಕಳ್ಳ ಸಂತೆಯಲ್ಲಿ ಅನಧಿಕೃತ ರಸಗೊಬ್ಬರ ಮಾರಾಟ ಮತ್ತು ದಾಸ್ತಾನು ಕಂಡು ಬಂದಲ್ಲಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಇಲಾಖೆಯ ಜಾಗೃತ ದಳದ ಅಧಿಕಾರಿಗಳಾದ ಸುನಿಲ್ ಕುಮಾರ್ ಪೋನ ನಂಬರ್ 8277932117 ಹಾಗೂ ನಾಗರಾಜ ಪೋನ ನಂಬರ್ 8277932109 ಇವರಿಗೆ ಕರೆ ಮಾಡಿ ದೂರ ನೀಡಬಹುದಾಗಿದ್ದು, ಈ ಸೇವೆ ದಿನದ 24 ಗಂಟೆ ಲಭ್ಯವಿದೆ. ಈಗಾಗಲೇ ಜಿಲ್ಲೆಯಲ್ಲಿ ರಸಗೊಬ್ಬರ ನಿಯಂತ್ರಣ ಕಾಯ್ದೆ ಉಲ್ಲಂಘನೆ ಮಾಡಿದ 2 ರಸಗೊಬ್ಬರಗಳ ಅಂಗಡಿಗಳ ಲೈಸೆನ್ಸ ಅಮಾನತ್ತು ಮಾಡಿದ್ದು ಮತ್ತೆರಡು ಅಂಗಡಿಗಳ ಲೈಸೆನ್ಸಗಳನ್ನು ರದ್ದುಪಡಿಸಲಾಗಿದೆ ಎಂದು ಹೇಳಿದರು.
ಗೂಗಲ್ ಮೀಟ್ ವಿಡಿಯೋ ಸಂವಾದದಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೆಶಕರಾದ ಕೃಷ್ಣ ಉಕ್ಕುಂದ. ಕೃಷಿ ಇಲಾಖೆಯ ಉಪನಿರ್ದೆಶಕರಾದ ಎಲ್. ಸಿದ್ದೇಶ್ವರ. ಕನಕಗಿರಿ ತಹಶಿಲ್ದಾರ ವಿಶ್ವನಾಥ ಮುರಡಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಶಿಲ್ದಾರರು. ಸಹಾಯಕ ಕೃಷಿ ಅಧಿಕಾರಿಗಳು. ರೈತ ಸಂಪರ್ಕ ಅಧಿಕಾರಿಗಳು. ಇನ್ಸೂರೆನ್ಸ್ ಕಂಪನಿಯ ಹಾಗೂ ಗ್ರಾಮ ಒನ್ ಕೇಂದ್ರದ ಪ್ರತಿನಿಧಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

About The Author
Discover more from JANADHWANI NEWS
Subscribe to get the latest posts sent to your email.