ಚಿತ್ರದುರ್ಗಜ12:
ಮೃಗಾಲಯದಲ್ಲಿ ಪ್ರಾಣಿಗಳ ಆರೈಕೆ ಮಾಡುವಾಗ ಪ್ರಾಣಿಗಳಿಗೆ ಆಹಾರ ಹಾಕುವಾಗ ಜಾಗೃತಿ ವಹಿಸಿ ತಮ್ಮನ್ನು ಕೂಡ ರಕ್ಷಣೆ ಮಾಡಿಕೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ನಗರದ ಆಡು ಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಅನಿವಾರ್ಯ ಸಂದರ್ಭದಲ್ಲಿ ಪ್ರಾಣಿಗಳು ಕಚ್ಚಿದಾಗ ಪರಚಿದಾಗ ಬೇಜವಾಬ್ದಾರಿತನ ಮಾಡದೆ ಸೋಪು ನೀರಿನಿಂದ ಪರಚಿದ ಭಾಗ ಸ್ವಚ್ಛಗೊಳಿಸಬೇಕು. ಯಾವುದೇ ತರಹದ ಬ್ಯಾಂಡೇಜ್ ಕಟ್ಟಬಾರದು. ತಕ್ಷಣ ವೈದ್ಯರಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುವ ಮುಖಾಂತರ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕೆಂದು ತಿಳಿಸಿದರು.
ಪ್ರಾಣಿಗಳ ಸಂಪರ್ಕದಿಂದ ವೈರಸ್ನಿಂದ ಹರಡುವ ರೇಬಿಸ್ ರೋಗ ಅಪಾಯಕಾರಿ ಜ್ವರ, ಆಯಾಸ, ಕೆಮ್ಮು, ವಾಂತಿ, ಅತಿಸಾರ ಹಾಗೂ ತೀವ್ರತೆ ಹೆಚ್ಚಾದಂತೆ ಅತಿಯಾದ ಜೊಲ್ಲು ಸುರಿಸುವುದು. ನೀರು ಕುಡಿಯುವ ಭಯ ಇದರ ಲಕ್ಷಣಗಳು ರೋಗ ತಡೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚುಚ್ಚುಮದ್ದು ಲಭ್ಯ ಇದೆ. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುವುದು ಒಳಿತು. ಮಕ್ಕಳಿಗೆ ದಡಾರ ಮತ್ತು ರೂಬೆಲ್ಲ ರೋಗಬಾರದಂತೆ 9ನೇ ತಿಂಗಳಲ್ಲಿ ಹಾಗೂ 18ನೇ ತಿಂಗಳಲ್ಲಿ ಎಂಆರ್ ಲಸಿಕೆ ಉಚಿತವಾಗಿ ನೀಡಲಾಗುತ್ತದೆ ಎಂದರು.
ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ ಮಾತನಾಡಿ, ಅರಣ್ಯ ವಲಯದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಯವರು ಅನಿವಾರ್ಯವಾಗಿ ಕೈಕಾಲು ಗಾಯವಾದಲ್ಲಿ ಪ್ರಥಮ ಚಿಕಿತ್ಸೆ ಮಾಡಿಕೊಂಡು ಬೇಜವಾಬ್ದಾರಿ ಮಾಡದೆ ವೈದ್ಯರಲ್ಲಿ ಪರೀಕ್ಷೆಗೆ ಒಳಪಡಬೇಕು ರೋಗ ಬಂದ ಮೇಲೆ ವ್ಯಥೆ ಪಡುವುದಕ್ಕಿಂತ ರೋಗಬಾರದಂತೆ ಮುಂಜಾಗ್ರತೆ ವಹಿಸುವುದು ಬಹು ಮುಖ್ಯ ತಮ್ಮನ್ನು ರಕ್ಷಣೆ ಜೊತೆಗೆ ಪ್ರಾಣಿಗಳ ರಕ್ಷಣೆಗೆ ಮುಂದಾಗಿ ಎಂದರು.
ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಬಿ ಮೂಗಪ್ಪ ಮಾತನಾಡಿ, ಮಂಗನಬಾವು ಕಾಯಿಲೆ ಒಂದು ವೈರಸ್ ನಿಂದ ಬರುವ ರೋಗ, ಸೋಂಕಿತ ವ್ಯಕ್ತಿಯ ಉಸಿರಾಟದ ಹನಿಗಳಿಂದ ಗಾಳಿಯ ಮೂಲಕ ಅಥವಾ ನೇರ ಸಂಪರ್ಕದಿಂದ ಇದು ಆರೋಗ್ಯವಂತರಿಗೆ ಹರಡುತ್ತದೆ. ಸಾಮಾನ್ಯವಾಗಿ ಕಿವಿಯ ಕೆಳಗೆ ಮತ್ತು ಕೆನ್ನೆಯ ಭಾಗವು ಊದಿಕೊಳ್ಳುತ್ತದೆ ಜ್ವರ, ಗಂಟಲು ನೋವು ತಲೆನೋವು ಇದರ ಲಕ್ಷಣಗಳು ವೈದ್ಯರಲ್ಲಿ ತಪ್ಪದೇ ಚಿಕಿತ್ಸೆ ಪಡೆಯುವುದು ಒಳಿತು, ರೋಗ ಹರಡದಂತೆ ಸೋಂಕಿತರಿಂದ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಬಹು ಮುಖ್ಯ. ಮಂಗನಬಾವು ಬಂದ ರೋಗಿಯು ದ್ರವರೂಪದ ಆಹಾರ ಸೇವನೆ, ಹೆಚ್ಚು ನೀರು ಕುಡಿಯುವುದು, ಬೆಚ್ಚಗಿನ ಉಪ್ಪು ನೀರನ್ನು ಬಾಯಿ ಒಳಗಿಂದ ಮುಕ್ಕಳಿಸುವುದು, ಮಿದುವಾದ ಆಹಾರ ಸೇವನೆ ಮಾಡಬೇಕು . ಒಮ್ಮೆ ರೋಗ ಬಂದರೆ ಪುನಃ ಅವರಿಗೆ ಮರುಕಳಿಸುವುದಿಲ್ಲ ಎಂದರು
ವಲಯ ಅರಣ್ಯ ಅಧಿಕಾರಿಗಳಾದ ಅಕ್ಷತಾ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಪ್ರಾಣಿಗಳ ಸೇವೆ ಮಾಡುವಾಗ ಸಿಬ್ಬಂದಿಯವರು ವೈದ್ಯರು ನೀಡಿದ ಮಾರ್ಗದರ್ಶನ ತಪ್ಪದೇ ಪಾಲಿಸಿ ಮೃಗಗಳ ರಕ್ಷಣೆಗೆ ಆದ್ಯತೆ ನೀಡಿರಿ ಎಂದರು.
ಆರೋಗ್ಯ ತಪಾಸಣಾ ಶಿಬಿರದಲ್ಲಿ ಡಾ.ಮಂಜರಿ ಮೃಗಾಲಯದ 25 ಜನ ಸಿಬ್ಬಂದಿಯವರಿಗೆ ಆರೋಗ್ಯ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ ನೀಡಿದರು. ಫಾರ್ಮಸಿ ಅಧಿಕಾರಿ ಸಲ್ಮಾನ್ ಮತ್ತಿತರರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.