
ನಾಯಕನಹಟ್ಟಿ: ಬೇಡ ಜನರ ಆರೋಗ್ಯ ಸೇವೆಗಾಗಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೂಳಿಸಿ ಸಾಕಷ್ಟು ಅನುದಾನ ಬಿಡುಗಡೆ ಮಾಡಿದರು ಸಹ ಸರ್ಕಾರಿ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಚಿಕಿತ್ಸೆ ದೂರೆಯದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ಇದು ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತ ಪೊಲೀಸರ ತಂಡ ದಿಢೀರ್ ಭೇಟಿ ನೀಡಿ ಹಲವು ದಾಖಲೆಗಳನ್ನು ಪರಿಶೀಲಿಸಿದಾಗ ಸಮಸ್ಯೆಗಳ ಸರಮಾಲೆ ಬೆಳಕಿಗೆ ಬಂದಿವೆ.
ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರವು ಅಂದಾಜು 48 ಹಳ್ಳಿಗಳಿಗೆ ಆರೋಗ್ಯ ಸೇವೆ ನೀಡುತ್ತದೆ. ಅನಾರೋಗ್ಯ, ಅಪಘಾತ, ತುರ್ತು ವೈದ್ಯಕೀಯ ವ್ಯವಸ್ಥೆಗಾಗಿ ನಿತ್ಯ ಹಲವರು ಇದೇ ಆಸ್ಪತ್ರೆಗೆ ಬರುತ್ತಾರೆ. ಆದರೆ, ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ವೈದ್ಯಕೀಯ ಸೌಲಭ್ಯಗಳು, ಶುಚಿತ್ವದ ಕೊರತೆ ಸೇರಿ ಹಲವು ಸಮಸ್ಯೆಗಳು ರೋಗಿಗಳ ಅನುಭವಕ್ಕೆ ಬಂದಿವೆ.
ಆಸ್ಪತ್ರೆಯಲ್ಲಿ ಖಾಯಂ ಆಡಳಿತಾಧಿಕಾರಿ ಇಲ್ಲ. ಹಲವು ತಿಂಗಳಿಂದ ತಾಲ್ಲೂಕು ವೈದ್ಯಾಧಿಕಾರಿಯೇ ಇಲ್ಲಿನ ಆಸ್ಪತ್ರೆಗೂ ಹೆಚ್ಚುವರಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ವಾರಕ್ಕೊಮ್ಮೆಯೂ ಆಸ್ಪತ್ರೆಗೆ ಬರುತ್ತಿಲ್ಲ. ಪಾಳಿಪದ್ಧತಿಯಲ್ಲಿ ಕರ್ತವ್ಯ ನಿರ್ವಹಿಸಬೇಕಿರುವ ವೈದ್ಯರು 24 ಗಂಟೆಗಳವರೆಗೂ ನಿರಂತರವಾಗಿ ಕರ್ತವ್ಯ ನಿರ್ವಹಿಸಿ ನಂತರ ಮೂರು ದಿನಗಳ ಕಾಲ ಆಸ್ಪತ್ರೆ ಕಡೆಗೆ ತಿರುಗಿ ನೋಡುವುದಿಲ್ಲ.
ಆಯುಷ್ ವೈದ್ಯರೊಬ್ಬರೇ ನಿತ್ಯ ಆಸ್ಪತ್ರೆಯಲ್ಲಿ ಖಾಯಂ ವೈದ್ಯರಾಗಿದ್ದಾರೆ. ಹಾಗಾಗಿ ಯಾವ ವೈದ್ಯರು ಯಾವ ದಿನ ಬರುತ್ತಾರೆ ಎಂಬುದು ಯಾವ ರೋಗಿಗೂ ತಿಳಿಯುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು.
ಬುಧವಾರ ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ ಅವರ ನೇತೃತ್ವದ ಅಧಿಕಾರಿಗಳ ತಂಡ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಹಲವು ದಾಖಲೆಗಳನ್ನು ಪರಿಶೀಲಿಸಿತು.
ನಂತರ ಆಸ್ಪತ್ರೆಯಲ್ಲಿದ್ದ ರೋಗಿಗಳಿಂದ ಮಾಹಿತಿ ಪಡೆದರು.
ಲೋಕಾಯುಕ್ತ ಪೊಲೀಸರು, ಆಸ್ಪತ್ರೆಯ ಸಿಬ್ಬಂದಿ ಹಾಜರಾತಿಯನ್ನು ಪರಿಶೀಲಿಸಿ, ಗೈರಾದ ಅಧಿಕಾರಿಗಳ ಮಾಹಿತಿ ಪಡೆದರು. ಔಷಧ ಕೇಂದ್ರದಲ್ಲಿರುವ ಔಷಧಗಳನ್ನು ಪರಿಶೀಲಿಸಿ, ಕೊರತೆ ಇರುವ ಔಷಧಗಳನ್ನು ದಾಖಲಿಸಿಕೊಂಡರು. ಆಸ್ಪತ್ರೆಯಲ್ಲಿನ ಸ್ವಚ್ಛತೆ ಬಗ್ಗೆ ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಆಯುಷ್ ವೈದ್ಯರು ಬಿಟ್ಟರೆ ಬೇರೆ ವೈದ್ಯರು ಇಲ್ಲದ ಕಾರಣ ಶುಶೂಷಕ ಅಧಿಕಾರಿಯಿಂದ ಮಾಹಿತಿ ಪಡೆದರು.
ಇದೇ ವೇಳೆ ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಪರ್ಯಾಯವಾಗಿ ಸೋಲಾರ್, ಯುಪಿಎಸ್ ಇಲ್ಲದಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಜನರೇಟರ್ ವ್ಯವಸ್ಥೆಯ ಬಗ್ಗೆ ಆಸ್ಪತ್ರೆಯ ದ್ವಿತೀಯದರ್ಜೆ ಅಧಿಕಾರಿ ಬಳಿ ಮಾಹಿತಿ ಕೇಳಿದಾಗ ‘ಜನರೇಟರ್ ಕಾರ್ಯ ನಿರ್ವಹಿಸುತ್ತದೆ’ ಎಂದು ಹೇಳಿದರು.
ನಂತರ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅದು ಕಾರ್ಯ
ನಿರ್ವಹಿಸದಿರುವುದು ಕಂಡುಬಂತು. ಇದರಿಂದ
ಕೋಪಗೊಂಡು ಅಧಿಕಾರಿಯ ವಿರುದ್ಧ ಹರಿಹಾಯ್ದರು.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ
ಹಣ್ಣು, ಹಾಲು, ಬ್ರೆಡ್ ನೀಡಲಾಗುತ್ತಿದೆಯೇ ಎಂಬ ಬಗ್ಗೆ
ದಾಖಲೆ ಪರಿಶೀಲಿಸಿದರು. ದಾಖಲೆಗಳಲ್ಲಿ ಹೆಸರುಗಳು
ಮಾತ್ರ ಇದ್ದವು. ಆದರೆ, ರೋಗಿಗಳು ಇರಲಿಲ್ಲ.
ರೋಗಿಗಳಿಗೆ ನೀಡುವ ಹಣ್ಣು, ಹಾಲು, ಬ್ರೆಡ್
ಕಣ್ಮರೆಯಾಗಿದ್ದವು. ಆಸ್ಪತ್ರೆಯಲ್ಲಿನ ಸಮಸ್ಯೆಗಳ ಕುರಿತು
ವಿವರವಾಗಿ ವರದಿ ದಾಖಲಿಸಿಕೊಂಡು ಅಧಿಕಾರಿಗಳ
ತಂಡ ನಿರ್ಗಮಿಸಿತು.
About The Author
Discover more from JANADHWANI NEWS
Subscribe to get the latest posts sent to your email.