ಬೆಳಗಾವಿ ಸುವರ್ಣ ವಿಧಾನಸೌಧ (ವಿಧಾನಸಭೆ) ಡಿ. 9
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರವು ಬೆಳೆಯುತ್ತಿರುವ ವೇಗಕ್ಕೆ ಅನುಗುಣವಾಗಿ, ನಗರಕ್ಕೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಒಳಚರಂಡಿ ವ್ಯವಸ್ಥೆ (ಯುಜಿಡಿ) ನಿರ್ಮಾಣಕ್ಕೆ ಅಗತ್ಯವಿರುವ 260 ಕೋಟಿ ರೂ. ಅನುದಾನವನ್ನು ಒದಗಿಸುವಂತೆ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮನವಿ ಮಾಡಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಪ್ರಾರಂಭವಾದ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆಯಡಿ ಶಾಸಕ ಟಿ. ರಘುಮೂರ್ತಿ ಅವರು ಈ ಮನವಿ ಮಾಡಿದರು.
ಚಳ್ಳಕೆರೆ ಕ್ಷೇತ್ರದಲ್ಲಿ ನಾನು ಮೂರು ಬಾರಿ ಶಾಸಕನಾಗಿದ್ದೇನೆ. ಚಳ್ಳಕೆರೆ ನಗರ ವೇಗವಾಗಿ ಬೆಳೆಯುತ್ತಿದ್ದು, ನಗರಕ್ಕೆ ಉತ್ತಮ ಮೂಲಭೂತ ಸೌಲಭ್ಯ ಕಲ್ಪಿಸುವುದು ನನ್ನ ಆಶಯವಾಗಿದೆ. ಚಳ್ಳಕೆರೆ ನಗರಕ್ಕೆ ಒಳಚರಂಡಿ ವ್ಯವಸ್ಥೆ (ಯುಜಿಡಿ) ಕಲ್ಪಿಸಲು 2013 ರಲ್ಲಿಯೇ ಪ್ರಸ್ತಾಪಿಸಲಾಗಿತ್ತು. ಬಳಿಕ 2021 ರಲ್ಲಿ ಈ ಯೋಜನೆಗೆ 197 ಕೋಟಿ ರೂ. ಗಳ ಅಂದಾಜು ಮಾಡಲಾಗಿತ್ತು. ಇದೀಗ ಯೋಜನೆಯ ವೆಚ್ಚ 253 ಕೋಟಿ ರೂ. ಆಗಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು, ಪ್ರಸ್ತುತ ಯೋಜನೆಯ ಜಾರಿಗೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ ಹಿನ್ನೆಲೆಯಲ್ಲಿ, ಈಗ ಮತ್ತೊಮ್ಮೆ ಮನವಿ ಸಲ್ಲಿಸುತ್ತಿದ್ದೇನೆ ಎಂದರು. ಇದಕ್ಕೆ ಉತ್ತರ ನೀಡಿದ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಭೈರತಿ ಸುರೇಶ್ ಅವರು, 2015ರಲ್ಲಿ ಈ ಯೋಜನೆ 100ಕೋಟಿ ರೂ. ಗಳ ವೆಚ್ಚದಲ್ಲಿ ಆಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಸುಮಾರು 260 ಕೋಟಿ ರೂ. ಗಳ ವೆಚ್ಚದ ಅಂದಾಜು ಮಾಡಲಾಗಿದೆ. ಹೀಗಾಗಿ ಹಣಕಾಸು ಇಲಾಖೆಯ ಸಲಹೆ ಪಡೆದು, ಹಣಕಾಸಿನ ಲಭ್ಯತೆ ನೋಡಿಕೊಂಡು, ಯೋಜನೆ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಟಿ. ರಘುಮೂರ್ತಿ ಅವರು ಮುಖ್ಯಮಂತ್ರಿಗಳೇ ಯೋಜನೆಯ ಜಾರಿಗೆ ಆಸಕ್ತಿ ತೋರಿದ್ದು, ಮುಖ್ಯಮಂತ್ರಿಗಳು ಈ ಯೋಜನೆ ಸಾಕಾರಗೊಳಿಸಲು ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
About The Author
Discover more from JANADHWANI NEWS
Subscribe to get the latest posts sent to your email.