
ಹಿರಿಯೂರು:
ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಹೋಗಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ತಳ್ಳುಗಾಡಿಯಲ್ಲಿ ಕೊಡಗಳನ್ನಿಟ್ಟುಕೊಂಡು ನೀರು ತೆಗೆದುಕೊಂಡು ಹೋಗುತ್ತಿದ್ದ ಮಹಿಳೆಯರನ್ನು ನೋಡಿ ಪಿ.ಡಿ.ಒ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ತಾಲ್ಲೂಕಿನ ಸೊಂಡೆಕೆರೆ ಗ್ರಾಮದಲ್ಲಿ ನಡೆದಿದೆ.
ಕುಡಿಯುವ ನೀರನ್ನು ಕೊಡಲು ಆಗದ ಮೇಲೆ ಇಂತಹ ಗ್ರಾಮಪಂಚಾಯಿತಿಗಳಿಂದ ಆಗುವ ಪ್ರಯೋಜನವಾದರೂ ಏನು. ತಳ್ಳುಗಾಡಿಗಳಲ್ಲಿ ಕೊಡಗಳನ್ನಟ್ಟಿಕೊಂಡು ಮಹಿಳೆಯರು ನೀರಿಗಾಗಿ ಪರದಾಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ. ಆದಷ್ಟು ಬೇಗ ಗ್ರಾಮದ ಜನರಿಗೆ ಗೆ ವಾಣಿವಿಲಾಸ ಜಲಾಶಯದ ನೀರು ಹಾಗೂ ಕೊಳವೆ ಬಾವಿಯಲ್ಲಿನ ನೀರು ಪೂರೈಸುವ ಮೂಲಕ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ಎಂಬುದಾಗಿ ಸಚಿವರು ಪಿ.ಡಿ.ಒ.ಗೆ ತಾಕೀತು ಮಾಡಿದರು.
ಗ್ರಾಮದ ಕೆಂಚಾಂಬದೇವಿ ದೇವಸ್ಥಾನದ ಅಭಿವೃದ್ಧಿಗೆ 20ಲಕ್ಷ ರೂ ಅನುದಾನ ನೀಡುವುದಾಗಿ ಭರವಸೆ ನೀಡಿದ ಸಚಿವರು, ಗ್ರಾಮಸ್ಥರು ಒಟ್ಟಾಗಿ ದೇವಸ್ಥಾನದ ಜೀರ್ಣೋದ್ಧಾರ ಮಾಡಲು ಮುಂದಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮಪಂಚಾಯಿತಿ ಮಟ್ಟದಲ್ಲಿ ಬಗೆಹರಿಯಬಹುದಾದ ಸಮಸ್ಯೆಗಳಿಗೆ ಪಿ.ಡಿ.ಒ ಮೂಲಕ ಸ್ಥಳದಲ್ಲಿಯೇ ಪರಿಹಾರ ಒದಗಿಸಿದ ಸಚಿವರು, ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯಿತಿ ಕಚೇರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಚೇರಿಗಳಿಗೆ ಅಲೆದಾಡಿಸದೆ ಶೀಘ್ರವೇ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಎಸ್.ಟಿ. ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಸೊಂಡೆಕೆರೆ ನಾಗರಾಜ್, ಕಾಂಗ್ರೆಸ್ ಮುಖಂಡರುಗಳಾದ ಶ್ರೀಮತಿ ನಾಗರತ್ನಮ್ಮ, ಎಸ್.ಟಿ. ಮಂಜುನಾಥ್, ಜಯಪ್ರಕಾಶ್, ಬಿ.ಎಚ್. ಮಹಾಂತೇಶ್, ಕೆ.ನಿಂಗಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


About The Author
Discover more from JANADHWANI NEWS
Subscribe to get the latest posts sent to your email.