ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ : ಪುರಸಭೆ ವತಿಯಿಂದ ಪಟ್ಟಣದ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ನೀಡುವ ಕಾರ್ಯ ಸೋಮವಾರದಿಂದ ಆರಂಭವಾಗಿದೆ.
ಪಟ್ಟಣದ ಪಶು ಆಸ್ಪತ್ರೆ ಪಶುಪತಿ ಪೆಟ್ ಲೈಫ್ ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಕೇಂದ್ರ ತೆರೆಯಲಾಗಿದೆ. ಶಸ್ತ್ರ ಚಿಕಿತ್ಸೆ ನಂತರ ಮಾಲೀಕರಿಗೆ ನಾಯಿಗಳನ್ನು ಒಪ್ಪಿಸಲಾಗುವುದು. ಅಥವಾ ಪುರಸಭೆ ವತಿಯಿಂದಲೇ ನಾಯಿಗಳನ್ನು ಆರೈಕೆ ಮಾಡಲಾಗುವುದು.
ವಿವಿಧ ಸಂಸ್ಥೆಗಳ ಆವರಣ, ಕ್ರೀಡಾಂಗಣ, ಶಿಕ್ಷಣ ಸಂಸ್ಥೆಗಳ ಆವರಣ, ಆಸ್ಪತ್ರೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು ಹಾಗೂ ವೃದ್ಧರ ಮೇಲೆ ದಾಳಿ ಮಾಡಿ, ಗಾಯಗೊಳಿಸುತ್ತಿರುವ ಘಟನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪುರಸಭೆ ವತಿಯಿಂದ ಈ ಕಾರ್ಯ ನಡೆಯುತ್ತಿದೆ.
ಇಲ್ಲಿಯವರೆಗೂ 45 ಬೀದಿ ನಾಯಿಗಳನ್ನು ಸೆರೆ ಹಿಡಿಯಲಾಗಿದೆ. ಅದರಲ್ಲಿ 10 ಬೀದಿ ನಾಯಿಗಳಿಗೆ ಈಗಾಗಲೇ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಹೆಣ್ಣು ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲು ಪ್ರತ್ಯೇಕ ವೈದ್ಯರಿದ್ದಾರೆ.
ತರಬೇತಿ ಕೊರತೆ : ಬೀದಿನಾಯಿಗಳನ್ನು ಹಿಡಿಯುವ ಜವಾಬ್ದಾರಿಯನ್ನು ಪೌರಕಾರ್ಮಿಕರು ಹಾಗೂ ನಗರಸಭೆಯ ಸಿಬ್ಬಂದಿಗಳಿಗೆ ವಹಿಸಲಾಗಿದೆ. ಆದರೆ ಅವರಿಗೆ ಸೂಕ್ತ ತರಬೇತಿ ನೀಡಿಲ್ಲ. ಹಾಗಾಗಿ ಬೀದಿ ನಾಯಿ ಹಿಡಿಯುವವರನ್ನು ತಮಿಳುನಾಡಿನಿಂದ 4 ಜನರನ್ನು ಕರೆಯಿಸಲಾಗಿದೆ. ಒಂದು ನಾಯಿ ಹಿಡಿಯಲು ಅವರಿಗೆ ₹250 ನೀಡಬೇಕು. ಸರ್ಕಾರದಿಂದ ಒಂದು ನಾಯಿಗೆ ಶಸ್ತ್ರಚಿಕಿತ್ಸೆಗಾಗಿ ₹1450 ಮಾತ್ರ ನೀಡುತ್ತದೆ. ನಾಯಿ ಹಿಡಿದು ಸಾಗಿಸಲು ವಾಹನಗಳ ಸೌಲಭ್ಯವಿಲ್ಲದ ಕಾರಣ ಪುರಸಭೆ ಕಸ ಸಾಗಿಸುವ ವಾಹನಗಳಲ್ಲಿ ಸಾಗಿಸಲಾಗುತ್ತಿದೆ. ನಾಯಿ ಹಿಡಿಯುವವರಿಗೆ ನಿತ್ಯ ಕೂಲಿ, ವೈದ್ಯರಿಗೂ ಸಂಭಾವನೆ ನೀಡಬೇಕು. ಎನ್.ಜಿ.ಓ ಕೇಂದ್ರಗಳು ನಿರ್ವಹಣೆಗೆ ಮುಂದೆ ಬಂದರೆ, ಅವರಿಗೆ ವಹಿಸುತ್ತೇವೆ ಎಂದು ಪರಿಸರ ಅಭಿಯಂತರ ರವೀಂದ್ರನಾಥ ಅಂಗಡಿ ತಿಳಿಸಿದರು.
ಈ ವೇಳೆ ಪುರಸಭೆ ಆರೋಗ್ಯ ನಿರೀಕ್ಷಕರುಗಳಾದ ಬಸವರಾಜ್, ಪ್ರವೀಣ್ ಹಾಗೂ ಸಿಬ್ಬಂದಿಗಳಿದ್ದರು.
About The Author
Discover more from JANADHWANI NEWS
Subscribe to get the latest posts sent to your email.