March 17, 2026
1754493911457.jpg


ಚಿತ್ರದುರ್ಗಆಗಸ್ಟ್06:
ಕೆ.ಎಂ.ಇ.ಆರ್.ಸಿ ನಿಧಿಯಡಿ ಶಿಕ್ಷಣ, ಆರೋಗ್ಯ, ಮಹಿಳೆ ಮತ್ತು ದುರ್ಬಲ ವರ್ಗದವರ ಏಳಿಗೆಗೆ ಒತ್ತು ನೀಡಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವಂತೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಸಂಜಯ್ ಎಸ್ ಬಿಜ್ಜೂರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಗಣಿಭಾದಿತ ವಲಯಗಳ ಸಮಗ್ರ ಪರಿಸರ ಯೋಜನೆ (ಸಿ.ಇ.ಪಿ.ಎಂ.ಐ.ಝಡ್) ಅಡಿಯಲ್ಲಿ ಕೈಗೊಳ್ಳುತ್ತಿರುವ ಕಾಮಗಾರಿ ಹಾಗೂ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆ.ಎಂ.ಇ.ಆರ್.ಸಿ ಮುಖ್ಯ ಉದ್ದೇಶ ಗಣಿಬಾಧಿತ ಪ್ರದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸವುದಾಗಿದೆ. ಈ ಹಿನ್ನಲೆಯಲ್ಲಿ ಯೋಜನೆಗಳ ವರದಿಯನ್ನು ಕಾಲ ಕಾಲಕ್ಕೆ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ರಾಜ್ಯ ಅಥವಾ ಕೇಂದ್ರ ಸರ್ಕಾರದ ಅನುದಾನದಲ್ಲಿ ಯೋಜನೆ ರೂಪಿಸುವಂತೆ ಕೆ.ಎಂ.ಇ.ಆರ್.ಸಿ ಅಡಿ ಯೋಜನೆಗಳನ್ನು ರೂಪಿಸಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಯೋಜನೆ ರೂಪಿಸಬೇಕಾದ ಗಣಿಬಾದಿತ ಪ್ರದೇಶ ವ್ಯಾಪ್ತಿ, ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳು, ಆದ್ಯತಾ ವಲಯಗಳನ್ನು ಸ್ಪಷ್ಟವಾಗಿ ನಮೂದಿಸಿ, ಮಾನದಂಡಗಳನ್ನು ರೂಪಿಸಲಾಗಿದೆ. ಅಧಿಕಾರಿಗಳು ಈ ಮಾನದಂಡಗಳನ್ನು ಆಧರಿಸಿ ವಿಸ್ತøತ ಯೋಜನಾ ವರದಿಗಳನ್ನು ಸಿದ್ದಪಡಿಸಬೇಕು ಎಂದು ಡಾ.ಸಂಜಯ್ ಎಸ್ ಬಿಜ್ಜೂರ್ ಹೇಳಿದರು.
ಸರ್ಕಾರ ಘೋಷಿಸಿದ ಯೋಜನೆಗಳಿಗೆ ಆರಂಭದಲ್ಲಿ ಒಂದನೇ ಮೂರು ಅಂಶದ ಅನುದಾನವನ್ನು ಬಿಡುಗಡೆ ಮಾಡುತ್ತಿದೆ. ಆದರೆ ಕೆ.ಎಂ.ಇ.ಆರ್.ಸಿ ಅಡಿಯಲ್ಲಿ ಕೈಗೆತ್ತಿಕೊಳ್ಳುವ ಯೋಜನೆಗಳಿಗೆ ಆರಂಭದಲ್ಲಿಯೇ ಕಾಮಗಾರಿಗೆ ತಗಲುವ ಪೂರ್ಣ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. ಕಾಮಗಾರಿಯ ಪ್ರಗತಿಯಲ್ಲಿ ಯಾವುದೇ ಆರ್ಥಿಕ ತೊಂದರೆ ಎದುರಾಗುವುದಿಲ್ಲ. ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬಹುದು ಎಂದು ಡಾ.ಸಂಜಯ್ ಎಸ್ ಬಿಜ್ಜೂರ್ ತಿಳಿಸಿದರು.
ಜಿಲ್ಲೆಯ ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು ತಾಲ್ಲೂಕಿನ ಗಣಿಬಾದಿತ ಪ್ರದೇಶಗಳಲ್ಲಿ ರೂ.3,792.30 ಕೋಟಿ ವೆಚ್ಚದ ಕ್ರಿಯಾ ಯೋಜನೆಗಳನ್ನು ರೂಪಿಸಲಾಗಿದೆ. ಪರಿಸರ ಪುನಶ್ಚೇತನ ಅಡಿಯಲ್ಲಿ ಅರಣ್ಯ ಇಲಾಖೆ ರೂ.540.83 ಕೋಟಿ, ಮಾಲಿನ್ಯ ನಿಯಂತ್ರಣ ಮಂಡಳಿ ರೂ.14.81 ಕೋಟಿ, ಕೃಷಿ ಸಂಬಂಧಿಸಿ ಚಟುವಟಿಕೆಗಳಡಿಯಲ್ಲಿ ಕೃಷಿ ಇಲಾಖೆ ರೂ.324.85 ಕೋಟಿ, ಪಶು ಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ರೂ.38 ಕೋಟಿ, ರೇಷ್ಮೆ ಇಲಾಖೆ ರೂ.3.5 ಕೋಟಿ, ತೋಟಗಾರಿಕೆ ಇಲಾಖೆ ರೂ.17.06 ಕೋಟಿ, ಮೀನುಗಾರಿಕೆ ರೂ.7.62 ಕೋಟಿ ಯೋಜನೆಗಳನ್ನು ರೂಪಿಸಿವೆ.
ಕುಡಿಯುವ ನೀರು, ನೈರ್ಮಲ್ಯ ಮತ್ತು ಗ್ರಾಮೀಣ ರಸ್ತೆಗಳ ಅಭಿವೃದ್ದಿಗಾಗಿ ನಗರ ನೀರು ಮತ್ತು ಒಳಚಂರಡಿ ಮಂಡಳಿ ರೂ.165 ಕೋಟಿ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ರೂ.533 ಕೋಟಿ, ಪಂಚಾಯತ್ ರಾಜ್ ಇಂಜಿಯರಿಗ್ ವಿಭಾಗ ರೂ.280.68 ಕೋಟಿ ಯೋಜನೆಗಳನ್ನು ಸಿದ್ದಪಡಿಸಿವೆ.
ಆರೋಗ್ಯ ಇಲಾಖೆ ಸಮುದಾಯ, ಪ್ರಾಥಮಿಕ ಹಾಗೂ ಉಪ ಆರೋಗ್ಯ ಕೇಂದ್ರಗಳನ್ನು ಬಲಪಡಿಸಲು ರೂ.114 ಕೋಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ರೂ.114 ಕೋಟಿ ನೂತನ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ.
ಕೆ.ಎಂ.ಇ.ಆರ್.ಸಿ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಗೆ ರೂ.255.94 ಕೋಟಿ, ಪಿಯು ಕಾಲೇಜುಗಳ ಮೂಲ ಸೌಕರ್ಯ ಹಾಗೂ ಕಲಿಕಾ ಸುಧಾರಣೆಗಳ ಬಲವರ್ಧನೆಗಾಗಿ ರೂ.50 ಕೋಟಿ ನೀಡಲಾಗಿದೆ.
ದುರ್ಬಲ ವರ್ಗದವರ ಏಳಿಗೆಗಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆ 94.03 ಕೋಟಿ, ಸಮಾಜ ಕಲ್ಯಾಣ ಇಲಾಖೆ ರೂ.50 ಕೋಟಿ, ಹಿಂದುಗಳಿದ ವರ್ಗಗಳ ಇಲಾಖೆ ರೂ.25.31 ಕೋಟಿ, ಅಲ್ಪಸಂಖ್ಯಾತರ ಇಲಾಖೆ ರೂ.19.2 ಕೋಟಿ ಯೋಜನೆ ರೂಪಿಸಿವೆ.
ಗ್ರಾಮೀಣ ಭಾಗದಲ್ಲಿನ ಮನೆ ಯೋಜನೆಗಾಗಿ ರೂ.106.89 ಕೋಟಿ, ಪ್ರವಾಸೋದ್ಯಮ ಇಲಾಖೆ 34.5 ಕೋಟಿ, ಸಣ್ಣ ನಿರಾವರಿ ಇಲಾಖೆ ರೂ.154.7 ಕೋಟಿ ಮೀಸಲಿರಿಸಲಾಗಿದೆ.
ಭೌತಿಕ ಸೌಕರ್ಯಗಳ ನಿರ್ಮಾಣ ಅಡಿಯಲ್ಲಿ ರೂ.15 ಕೋಟಿ ವೆಚ್ಚದ ಸೈನ್ಸ್ ಪಾರ್ಕ್, 1 ಕೋಟಿ ವೆಚ್ಚದಲ್ಲಿ ಎನ್.ಸಿ.ಸಿ ಬಿಲ್ಡಿಂಗ್, ಸಾರ್ವಜನಿಕ ಗ್ರಂಥಾಲಯಗಳ ಬಲವರ್ಧನೆಗೆ ರೂ.10.29 ಕೋಟಿ, ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ ರೂ.25 ಕೋಟಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ರೂ.50 ಕೋಟಿ, ಗಣಿಗಾರಿಕೆ ಇಲಾಖೆ ರೂ.3 ಕೋಟಿ, ಕಂದಾಯ ಇಲಾಖೆ ರೂ.1 ಕೋಟಿ ಯೋಜನೆಗಳನ್ನು ರೂಪಿಸಿವೆ.
ಕೌಶಲ್ಯಾಭಿವೃದ್ಧಿ ಇಲಾಖೆ ರೂ.70.79 ಕೋಟಿ, ಲೋಕೋಪಯೋಗಿ ಇಲಾಖೆ ರೂ.620.22 ಕೋಟಿ ಕ್ರಿಯಾ ಯೋಜನೆಗಳನ್ನು ಸಿದ್ದಪಡಿಸಿದ್ದು, ಈಗಾಗಲೇ ಅನುಮೋದನೆ ಪಡೆದು ಆರಂಭಿಸಿದ ಕಾಮಗಾರಿಗಳ ವಿವರವನ್ನು ಪ್ರತಿ ವರ್ಷವೂ ನೀಡಬೇಕು. ಕೆ.ಎಂ.ಇ.ಆರ್.ಸಿ ಅನುಮೋದನೆಯನ್ನು ಪಡೆಯದ ಯೋಜನೆಗಳಿಗೆ ಕೂಡಲೇ ಅನುಮೋದನೆ ಪಡೆಯುವಂತೆ ಡಾ.ಸಂಜಯ್ ಎಸ್ ಬಿಜ್ಜೂರ್ ಹೇಳಿದರು.
ಚಳ್ಳಕೆರೆ ಕುದಾಪುರದ ಬಳಿಯ ಭಾರತೀಯ ವಿಜ್ಞಾನ ಕೇಂದ್ರ (ಐಐಎಸ್‍ಸಿ) ಆವರಣದಲ್ಲಿಯೇ ಸೈನ್ಸ್ ಪಾರ್ಕ್ ನಿರ್ಮಾಣ ಮಾಡುವುದರಿಂದ ನಿರ್ವಹಣೆಗೆ ಉತ್ತಮವಾಗುತ್ತದೆ. ಗಣಿ ಬಾಧಿತ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಕೆ.ಎಂ.ಇ.ಆರ್.ಸಿ ವತಿಯಿಂದ ಯೋಜನೆ ರೂಪಿಸಿ, ಟೆಂಡರ್ ಕರೆಯಲಾಗುತ್ತಿದೆ. ಕೂಡಲೇ ಅನುಮೋದಿತ ಫಲಾನುಭವಿಗಳ ಪಟ್ಟಿಯನ್ನು ಕಳುಹಿಸಿಕೊಡಬೇಕು. ಸಮಾಜ ಕಲ್ಯಾಣ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸ್ಟೆಲ್‍ಗಳ ನಿರ್ಮಾಣದ ಯೋಜನೆ ರೂಪಿಸುವ ಮುನ್ನ ಸಾದಕ ಬಾದಕಗಳ ಕುರಿತು ವಿಸ್ತøತವಾಗಿ ಪರಿಶೀಲನೆ ನಡೆಸಬೇಕು. ತಾಲ್ಲೂಕು ಹಂತದಲ್ಲಿ ಪೌಷ್ಠಿಕ ಆಹಾರ ಸಿದ್ದಪಡಿಸಿ ಶಾಲಾ ಮಕ್ಕಳಿಗೆ ಒದಗಿಸುವ ಕುರಿತು ಇಸ್ಕಾನ್ ಸೇರಿದಂತೆ ಖಾಸಗಿ ಭಾಗಿದಾರರ ಜೊತೆ ಚರ್ಚೆ ನಡೆಸುವಂತೆ ಡಾ.ಸಂಜಯ್ ಎಸ್ ಬಿಜ್ಜೂರ್ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಸೂಚಿಸಿದರು.
ಗಣಿಬಾಧಿತ ಪ್ರದೇಶಗಳಲ್ಲಿ ಜಲಜೀವನ್ ಮಿಷನ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಲ್ಲಿ ಬಿಟ್ಟು ಹೋದ ಕಾಮಗಾರಿಗಳ ವಿವರವನ್ನು ಪಡೆದು ಯೋಜನಾ ವರದಿ ಸಿದ್ದಪಡಿಸಿ ಕೆ.ಎಂ.ಇ.ಆರ್.ಸಿಗೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಜಿಲ್ಲೆಯ ಶಿಕ್ಷಣ ವ್ಯವಸ್ಥೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ಇರುವ ಹೊಸ ಯೋಜನೆಗಳನ್ನು ರೂಪಿಸುವುದಾಗಿ ಜಿ.ಪಂ ಸಿಇಓ ಡಾ.ಆಕಾಶ್ ಹೇಳಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಜಿ.ಪಂ.ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಡಾ.ಮಹೇಶ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading