
ಹಿರಿಯೂರು:
ನಮ್ಮ ತಾಲೂಕಿನ ರೈತರ ಜೀವನಾಡಿಯಾಗಿರುವ ವೇದಾವತಿ ನದಿ ಪಾತ್ರದಲ್ಲಿ ಹಿರಿಯೂರು ಮತ್ತು ಚಳ್ಳಕೆರೆ ವ್ಯಾಪ್ತಿಯಲ್ಲಿ ಅನೇಕ ಬ್ಯಾರೇಜ್ ಗಳನ್ನು ನಿರ್ಮಿಸಿದ್ದಾರೆ. ಆದರೆ ಕೆಲವು ಪ್ರಭಾವಿ ವ್ಯಕ್ತಿಗಳು ನಗರದ ಲೇಔಟ್ ಗಳಲ್ಲಿ ಒಳಚರಂಡಿ ಮತ್ತು ಯುಜಿಡಿಯ ಕಶ್ಮಲವನ್ನು ವೇದಾವತಿ ನದಿಗೆ ಹರಿಸುತ್ತಿದ್ದಾರೆ ಎಂಬುದಾಗಿ ವಾಣಿವಿಲಾಸ ಸಾಗರ ಹೋರಾಟ ಸಮಿತಿ ಮುಖಂಡರಾದ ಶ್ರೀನಿವಾಸ್.ಕೆ.ಪಿಟ್ಲಾಲಿ ಅವರು ಆರೋಪಿಸಿದ್ದಾರೆ.
ಇದೇ ಆಗಸ್ಟ್ 4 ರಂದು ರಾತ್ರಿ 12 ರಿಂದ ಬೆಳಗಿನ ಜಾವ 4 ಗಂಟೆಯವರೆಗೂ ವೇದಾವತಿ ನದಿ ಪಾತ್ರದಲ್ಲಿ ಅತ್ಯುತ್ತಮ ಮಳೆಯಾದ ಪರಿಣಾಮವಾಗಿ ವೇದಾವತಿ ನದಿ, ರಭಸವಾಗಿ ಹರಿದು, ನಗರದಿಂದ ಮುಂದೆ ಆಲೂರು-ಪಿಟ್ಲಾಲಿ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನೀರು ಬೋರ್ಗೊರೆದು ಹರಿಯುತ್ತಿದ್ದು, ಇದರಿಂದ ಸಿಕ್ಕಾಪಟ್ಟೆ ನೊರೆಬರುತ್ತಿದ್ದು, ನೀರಿನ ದುರ್ವಾಸನೆಯಿಂದಾಗಿ ಜನ ಆತಂಕಕ್ಕೆ ಒಳಗಾಗಿದ್ದಾರೆ ಎಂದರಲ್ಲದೆ,
ನಗರದ ರಾಸಾಯನಿಕ ತ್ಯಾಜ್ಯಗಳಿಂದ ವೇದಾವತಿ ನದಿ ನೀರು ಮಲಿನಗೊಳ್ಳುತ್ತಿರುವುದು ಬಹಳ ಆತಂಕ ಸೃಷ್ಟಿ ಮಾಡಿದೆ. ಸಾರ್ವಜನಿಕರು ತಮ್ಮ ಗಮನಕ್ಕೆ ಬಂದಿದ್ದರೂ, ತಾವುಗಳು ಮೂಕ ಪ್ರೇಕ್ಷಕರಂತಿರುವುದು ಕಂಡುಬರುತ್ತಿದ್ದು, ಈ ಕಲುಷಿತ ನೀರಿನಿಂದ ನೀರಿನಲ್ಲಿರುವ ಮೀನುಗಳು ಸತ್ತುಹೋಗುತ್ತಿದ್ದು, ವೇದಾವತಿ ನದಿ ಪಾತ್ರದ ಜನರಿಗೆ ಮತ್ತು ಜಾನುವಾರುಗಳಿಗೆ ಬಹಳ ತೊಂದರೆಯಾಗಿದೆ.
ನಗರದ ಸುತ್ತಮುತ್ತಲಿನ ಕೈಗಾರಿಕೆಗಳು ತಮ್ಮ ತ್ಯಾಜ್ಯವನ್ನು ವೇದಾವತಿ ನದಿಗೆ ಹರಿದು ಬಿಡುತ್ತಿರುವುದೇ ಈ ನದಿ ನೀರಿನಲ್ಲಿ ನೊರೆ ಬರಲು ಕಾರಣವಾಗಿದ್ದು, ಇದರಿಂದಾಗಿ ನದಿಪಾತ್ರದ ಹಳ್ಳಿಗಳ ಜನರು ತೀವ್ರ ಆತಂಕಗೊಂಡಿದ್ದು, ಈ ಬಗ್ಗೆ ನಗರಸಭೆ ಪೌರಾಯುಕ್ತರಾದ ವಾಸೀಂರವರು ಸೂಕ್ತವಾಗಿ ಅವಲೋಕಿಸಿ ಇದರಿಂದಾಗುವ ಅನಾಹುತಗಳನ್ನು ತಪ್ಪಿಸಬೇಕು ಎಂಬುದಾಗಿ ಸಾಮಾಜಿಕ ಹೋರಾಟಗಾರ ಶ್ರೀನಿವಾಸ್ ಪಿಟ್ಲಾಲಿ ಇವರು ಮನವಿ ಮಾಡಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.