
ಹಿರಿಯೂರು:
ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಪೂರ್ಣಗೊಂಡು ಎಲ್ಲಾ ಮನೆಗಳಿಗೆ ನೀರು ಬರುವುದನ್ನು ಖಾತ್ರಿಪಡಿಸಿಕೊಂಡ ಕೂಡಲೇ ಗ್ರಾಮಪಂಚಾಯಿತಿಗೆ ಹಸ್ತಾಂತರ ಮಾಡಿಕೊಂಡು ಹರ್ ಘರ್ ಜಲ್ ಗ್ರಾಮ ಎಂದು ಘೋಷಣೆ ಮಾಡಬೇಕು ಎಂಬುದಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಡಾ.ಎಸ್.ಆಕಾಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನದ ಕುರಿತು ಕ್ಷೇತ್ರ ಭೇಟಿ ಪರಿಶೀಲನಾ ಆಂದೋಲನದ ಅಂಗವಾಗಿ ಹಿರಿಯೂರು ತಾಲ್ಲೂಕಿನ ಧರ್ಮಪುರ, ಶ್ರವಣಗೆರೆ, ಹರಿಯಬ್ಬೆ, ಮುಂಗಸವಳ್ಳಿ ಸೂಗೂರು, ಅಬ್ಬಿನಹೊಳೆ, ಗುಳ್ಯಾ ಮತ್ತು ಮಸ್ಕಲ್ ಗ್ರಾಮಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಗ್ರಾಮದಲ್ಲಿ ಹಳೇ ಪೈಪ್ ಲೈನ್ ಗೆ ಹೋಗುವ ನೀರನ್ನು ಸ್ಥಗಿತಗೊಳಿಸಿ, ಜಲಜೀವನ್ ಮಿಷನ್ ಪೈಪ್ ಲೈನ್ ನಲ್ಲಿ ನೀರು ಸರಬರಾಜು ಮಾಡಲು ತಿಳಿಸಿದ ಅವರು ಜೆ.ಜೆ.ಎಂ. ಯೋಜನೆಯಡಿ ಅಳವಡಿಸಿರುವ ಗೃಹ ನಳ ಸಂಪರ್ಕದ ಗುಣಮಟ್ಟ ಮೀಟರ್ ಅಳವಡಿಕೆ, ಕುಡಿಯುವ ನೀರಿನ ಪೂರೈಕೆ, ರಸ್ತೆ ಪುನಶ್ಚೇತನ ಹಾಗೂ ಎಫ್.ಟಿ.ಕೆ. ನೀರಿನ ಗುಣಮಟ್ಟ ಸೇರಿದಂತೆ ವಿವಿಧ ವರದಿಗಳನ್ನು ಪರಿಶೀಲನೆ ನಡೆಸಿದರು.
ಗ್ರಾಮದ ಶಾಲೆ ಮತ್ತು ಅಂಗನವಾಡಿಗಳಿಗೆ ಕಡ್ಡಾಯವಾಗಿ ಕಾರ್ಯಾತ್ಮಕ ಗೃಹ ನಳ ಸಂಪರ್ಕ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ತ್ವರಿತವಾಗಿ ಜಲಜೀವನ್ ಮಿಷನ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕು ಎಂಬುದಾಗಿ ಗ್ರಾಮೀಣ ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲಲಿ ಮನೆಗಳಿಂದ ಹಸಿಕಸ ಮತ್ತು ಒಣಕಸ ವಿಂಗಡಿಸಿ, ತ್ಯಾಜ್ಯವನ್ನು ಸ್ವಚ್ಚವಾಹಿನಿಯ ಮೂಲಕ ಸಂಗ್ರಹಿಸಿ, ನಂತರ ಸ್ವಚ್ಚ ಸಂಕೀರ್ಣ ಘಟಕಗಳಲ್ಲಿ ವೈಜ್ಞಾನಿಕ ಹಸಿ ಮತ್ತು ಒಂಕಸ ವಿಂಗಡಣೆ ಮಾಡಿ ವಿಲೇವಾರಿ ಮಾಡಬೇಕು ಎಂಬುದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಬಸವನಗೌಡ ಪಾಟೀಲ್, ಸಹಾಯಕ ಕಾರ್ಯಪಾಲಕ ಅಭಿಯಂತರ ಹಸೇನ್ ಭಾಷಾ, ಸಹಾಯಕ ಅಭಿಯಂತರ ಷಣ್ಮುಖಪ್ಪ, ಕಿರಿಯ ಅಭಿಯಂತರ ತಿಪ್ಪೇಸ್ವಾಮಿ, ಸಪೋರ್ಟ್ ಇಂಜಿನಿಯರ್ ಗಳಾದ ಆಕಾಶ್, ದಿವ್ಯಾ, ಜಲಜೀವನ್ ಮಷನ್ ಯೋಜನೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜುನಾಥ್ ನಾಡರ್, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಲಕ್ಷ್ಮಿಕಾಂತ್, ಶ್ರೀನಿವಾಸ್, ಶಬೀನಾ ತಾಜ್ ಬೇಗಂ ಸೇರಿದಂತೆ ಗ್ರಾಮಪಂಚಾಯಿತಿ ಅಧ್ಯಕ್ಷರು, ಸದಸ್ಯರು, ನೀರಗಂಟಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.