ಚಿತ್ರದುರ್ಗಮಾ.05:
ಪಿಎಂ ಇಂಟರ್ನ್ಶಿಪ್ ಭಾರತ ಸರ್ಕಾರದ ಹೊಸ ಯೋಜನೆಯಾಗಿದ್ದು, ಯುವ ಜನತೆಯ ಕೌಶಲ್ಯಾಭಿವೃದ್ಧಿ ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ ಎಂದು ಬೆಂಗಳೂರಿನ ಆರ್ಡಿಎಸ್ಡಿಇ ತರಬೇತಿ ಅಧಿಕಾರಿ ಆರ್.ಮಾಲತಿ ಹೇಳಿದರು.
ನಗರದ ಸ್ಟೇಡಿಯಂ ಸಮೀಪದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಜಿಲ್ಲೆಯ ತರಬೇತುದಾರರು ಹಾಗೂ ಉದ್ದಿಮೆದಾರರಿಗೆ ಅಪ್ರೆಂಟಿಶಿಪ್ ಮತ್ತು ಪ್ರಧಾನಮಂತ್ರಿ ಇಂಟರ್ನ್ಶಿಪ್ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ಇಂಟರ್ನ್ಶಿಪ್ ಎಂಬ ಹೊಸ ತರಬೇತಿ ಕಾರ್ಯಕ್ರಮವನ್ನು ಕಳೆದ ವರ್ಷದಿಂದ ಜಾರಿಗೊಳಿಸಿದೆ. ಒಂದು ವರ್ಷದ ತರಬೇತಿ ಕಾರ್ಯಕ್ರಮ ಇದಾಗಿದ್ದು, ತರಬೇತಿ ಅವಧಿಯಲ್ಲಿ 5 ಸಾವಿರ ಶಿಷ್ಯ ವೇತನ ನೀಡಲಾಗುತ್ತದೆ. ನೋಂದಣಿ ಮಾಡಿಕೊಳ್ಳಲು ಪ್ರತ್ಯೇಕ ಪೋರ್ಟಲ್ ಇದ್ದು, ನೋಂದಣಿ ಮಾಡಿಕೊಂಡ ಆರಂಭದಲ್ಲೇ ಅಗತ್ಯತೆಗಳಿಗಾಗಿ ಆರು ಸಾವಿರ ನೀಡಲಾಗುತ್ತದೆ. ತರಬೇತಿ ಪಡೆದು ನಾನಾ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಳ್ಳಬಹುದು ಅಥವಾ ಸ್ವಂತ ಉದ್ಯೋಗ ಮಾಡಬಹುದು, ಇದಕ್ಕಾಗಿ ಬ್ಯಾಂಕುಗಳಿಂದ ಸಾಲ ಸೌಲಭ್ಯ ಕೂಡ ಸಿಗಲಿದೆ ಎಂದು ಹೇಳಿದರು.
ಚಿತ್ರದುರ್ಗದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಬಿ.ಸುರೇಶ್ ಮಾತನಾಡಿ, ಜಿಲ್ಲೆಯ ಎಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿನ ತರಬೇತುದಾರರು ಮತ್ತು ಉದ್ದಿಮೆದಾರರಿಗೆ ಪ್ರಧಾನಮಂತ್ರಿ ಇಂಟರ್ನ್ಶಿಪ್ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಿದ್ದು, ಜಿಲ್ಲೆಯಲ್ಲಿ ಒಟ್ಟು 54 ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಿದ್ದು, ಇದರಲ್ಲಿ 200 ತರಬೇತುದಾರರು ಭಾಗವಹಿಸಿದ್ದಾರೆ. ತರಬೇತುದಾರರು ಹೆಚ್ಚಿನ ಕೌಶಲ್ಯ ಹೊಂದಿ ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಈ ಕಾರ್ಯಕ್ರಮ ಹೆಚ್ಚು ಸಹಕಾರಿಯಾಗಿದೆ ಎಂದು ತಿಳಿಸಿದರು.
ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಜರೀಫ್ಉಲ್ಲಾ ಮಾತನಾಡಿ, ಐಟಿಐ ತರಬೇತಿ ನಂತರ ಅಪ್ರೆಂಟಿಶಿಪ್ ಮತ್ತು ಪ್ರಧಾನಮಂತ್ರಿ ಇಂಟರ್ನ್ಶಿಪ್ ಬಗ್ಗೆ ಪೋರ್ಟಲ್ನಲ್ಲಿ ಯಾವ ರೀತಿ ನೋಂದಣಿ ಮಾಡಿಕೊಳ್ಳಬೇಕು ಎಂಬ ಬಗ್ಗೆ ಪವರ್ಪಾಯಿಂಟ್ ಮೂಲಕ ಮಕ್ಕಳಿಗೆ ತಿಳಿಸಿಕೊಡಲಾಗಿದೆ. ಇದರಿಂದ ಏನೇನು ಅನುಕೂಲಗಳಿವೆ ಎಂಬ ಬಗ್ಗೆ ಮಾಹಿತಿ ಒದಗಿಸಲಾಗಿದೆ. ದ್ವಿತೀಯ ವರ್ಷ ಐಟಿಐ ತರಬೇತಿ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳ ಅಪ್ರೆಂಟಿಶಿಪ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳಲಾಗಿದೆ. 1 ಸಾವಿರಕ್ಕೂ ಹೆಚ್ಚು ಉದ್ದಿಮೆದಾರರು ಕೂಡ ನೋಂದಣಿ ಮಾಡಿಕೊಂಡಿದ್ದಾರೆ. ಅಪ್ರೆಂಟಿಶಿಪ್ ಮತ್ತು ಪ್ರಧಾನಮಂತ್ರಿ ಇಂಟರ್ನ್ಶಿಪ್ ಪೋರ್ಟಲ್ ತರಬೇತುದಾರರು ಮತ್ತು ಉದ್ದಿಮೆದಾರರ ನಡುವೆ ಸೇತುವೆಯಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಆರ್ಡಿಎಸ್ಡಿಇ ಕಚೇರಿಯ ಶಾಂತಿ, ಬೆಂಗಳೂರು ಎನ್ಎಸ್ಡಿಸಿ ದುಂಡೇಶ್ ಬಡಿಗೇರ್, ಚಿತ್ರದುರ್ಗ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಿ ಅಧಿಕಾರಿ ಎಸ್.ಲೀಲಾವತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


About The Author
Discover more from JANADHWANI NEWS
Subscribe to get the latest posts sent to your email.