February 5, 2026
IMG20250320103631_01.jpg

ಚಳ್ಳಕೆರೆ:
ಸರಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಇಕೋ ಕ್ಲಬ್‌ಗಳು ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ, ಪ್ರಕೃತಿ ಪ್ರೀತಿ ಹಾಗೂ ಸಂರಕ್ಷಣೆಯ ಜವಾಬ್ದಾರಿಯನ್ನು ಮೂಡಿಸುವ ಮಹತ್ವದ ವೇದಿಕೆಗಳಾಗಿವೆ. ಸಮಗ್ರ ಶಿಕ್ಷಣ ಕರ್ನಾಟಕ ಅಡಿಯಲ್ಲಿ ಜಾರಿಯಲ್ಲಿರುವ ಈ ಕ್ಲಬ್‌ಗಳು ಗಿಡ ನೆಡುವಿಕೆ, ತ್ಯಾಜ್ಯ ನಿರ್ವಹಣೆ, ನೀರಿನ ಸಂರಕ್ಷಣೆ, ಪ್ಲಾಸ್ಟಿಕ್ ಮುಕ್ತ ಅಭಿಯಾನ ಸೇರಿದಂತೆ ಹಲವಾರು ಪರಿಸರ ಸ್ನೇಹಿ ಚಟುವಟಿಕೆಗಳ ಮೂಲಕ ಶಾಲಾ ಮಕ್ಕಳನ್ನು ಸುಸ್ಥಿರ ಭವಿಷ್ಯಕ್ಕಾಗಿ ಸಜ್ಜುಗೊಳಿಸುತ್ತಿವೆ.
ಇಕೋ ಕ್ಲಬ್‌ಗಳ ಮೂಲ ಉದ್ದೇಶವೇ ವಿದ್ಯಾರ್ಥಿಗಳಲ್ಲಿ ಜೀವವೈವಿಧ್ಯ ಸಂರಕ್ಷಣೆ, ಸ್ಥಳೀಯ ಪರಿಸರ ಸಮಸ್ಯೆಗಳ ಅರಿವು ಮತ್ತು ಪರಿಸರ ಸ್ನೇಹಿ ನಡವಳಿಕೆಯನ್ನು ಉತ್ತೇಜಿಸುವುದು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ತಂಡಗಳು ಈ ಕ್ಲಬ್‌ಗಳನ್ನು ನಿರ್ವಹಿಸುತ್ತಿದ್ದು, ತರಗತಿಗೆ ಸೀಮಿತವಾಗದೇ ಪರಿಸರ ಶಿಕ್ಷಣವನ್ನು ಪ್ರಾಯೋಗಿಕವಾಗಿ ಕಲಿಸುವ ಪ್ರಮುಖ ಪಾತ್ರ ವಹಿಸುತ್ತಿವೆ. ಮಿಷನ್ ಲೈಫ್ ಅಡಿಯಲ್ಲಿ ಸುಸ್ಥಿರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಇವು ಉತ್ತೇಜನ ನೀಡುತ್ತಿವೆ.

ತೆರಿಹಣ ಕಟ್ ಮಾಡಿ ಉಳಿದ ಹಣ ಹಾಗೂ ಖಾಲಿ ಬಿಲ್ ಕೊಟ್ಟಿರುವುದು

ಆದರೆ ಇಂತಹ ಪವಿತ್ರ ಉದ್ದೇಶಗಳೊಂದಿಗೆ ಕಾರ್ಯನಿರ್ವಹಿಸಬೇಕಾದ ಇಕೋ ಕ್ಲಬ್‌ಗಳ ಹೆಸರಲ್ಲೇ ಇದೀಗ ಭಾರೀ ಹಣದ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪಗಳು ಜನಧ್ವನಿ ನ್ಯೂಸ್ ತನಿಖೆಯಲ್ಲಿ ಬೆಳಕಿಗೆ ಬಂದಿವೆ.
ಮಾಹಿತಿ ಪ್ರಕಾರ, ಇಕೋ ಕ್ಲಬ್‌ಗಳಿಗೆ ಅಗತ್ಯವಾದ ಪಿಕಾಸಿ ಚೀಲಿಕೆ ಸೇರಿದಂತೆ ಇತರ ಸಾಮಗ್ರಿಗಳ ಖರೀದಿಗಾಗಿ ಸರ್ಕಾರ ಬಿಡುಗಡೆ ಮಾಡುವ ಅನುದಾನವನ್ನು, ಮುಖ್ಯ ಶಿಕ್ಷಕರ ಖಾತೆಗೆ ನೇರವಾಗಿ ಜಮೆ ಮಾಡದೇ, ನಿರ್ದಿಷ್ಟ ಏಜೆನ್ಸಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಈ ಏಜೆನ್ಸಿಗಳು ಮೊದಲು ಜಿಎಸ್‌ಟಿ ಸೇರಿದಂತೆ ತೆರಿಗೆ ಹಣವನ್ನು ಕಡಿತಗೊಳಿಸಿಕೊಂಡು, ಉಳಿದ ಹಣ ಹಾಗೂ ಖಾಲಿ ಬಿಲ್‌ಗಳನ್ನು ಮುಖ್ಯ ಶಿಕ್ಷಕರಿಗೆ ನೀಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇದರ ಪರಿಣಾಮವಾಗಿ, ಮುಖ್ಯ ಶಿಕ್ಷಕರು ಮತ್ತೆ ಆ ಹಣದಿಂದಲೇ ಅಗತ್ಯ ಸಾಮಗ್ರಿಗಳನ್ನು ಖರೀದಿಸಬೇಕಾದ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ಆದರೆ ಇಲ್ಲಿ ಮತ್ತೊಮ್ಮೆ ತೆರಿಗೆ ಹಣ ಕಡಿತವಾಗುತ್ತಿದ್ದು, ಒಂದೇ ಯೋಜನೆಗೆ ಎರಡು ಬಾರಿ ತೆರಿಗೆ ಹಣ ಸರ್ಕಾರದಿಂದ ಹೋಗುತ್ತಿದೆ. ಇದು ಸರಳ ದೋಷವಲ್ಲ, ಬದಲಾಗಿ ಯೋಜಿತ ಹಾಗೂ ಸಂಘಟಿತ ಹಣದ ಲೂಟಿ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಪ್ರಶ್ನೆಗಳು ಗಂಭೀರವಾಗಿವೆ –
ಪರಿಸರ ಜಾಗೃತಿಗಾಗಿ ಮೀಸಲಾದ ಹಣ ಏಜೆನ್ಸಿಗಳ ಕೈಗೆ ಹೇಗೆ ಹರಿಯಿತು?
ಖಾಲಿ ಬಿಲ್ ವ್ಯವಸ್ಥೆಗೆ ಶಿಕ್ಷಣ ಇಲಾಖೆ ಮೌನ ಸಮ್ಮತಿ ನೀಡಿದೆಯೇ?
ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ರೂಪಿಸಿದ ಯೋಜನೆಗಳು ಏಜೆನ್ಸಿಗಳ ಲಾಭದಾಯಕ ವ್ಯವಹಾರಗಳಾಗಿ ಮಾರ್ಪಟ್ಟಿವೆಯೇ?
ಈ ಅಕ್ರಮದಲ್ಲಿ ಅಧಿಕಾರಿಗಳ ಪಾತ್ರ ಏನು?
ಪರಿಸರ ಸಂರಕ್ಷಣೆಯ ಪಾಠ ಕಲಿಸಬೇಕಾದ ಇಕೋ ಕ್ಲಬ್ ಯೋಜನೆ, ಇದೀಗ ಶಿಕ್ಷಣ ಇಲಾಖೆಯಲ್ಲಿನ ಹಗಲು ದರೋಡೆಗೆ ಸಂಕೇತವಾಗಿ ಪರಿಣಮಿಸಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಚಕ್ಕರ್ ಮೇಕರ್ ಪ್ರಕರಣದಿಂದ ಈಗಾಗಲೇ ಟೀಕೆಗೆ ಒಳಗಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಇಕೋ ಕ್ಲಬ್ ಅಕ್ರಮದ ಮೇಲೂ ತಕ್ಷಣ ಸ್ವತಂತ್ರ, ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂಬ ಒತ್ತಾಯ ಜೋರಾಗಿದೆ.
ಶಿಕ್ಷರಲ್ಲಿ ಅಸಮದಾನ ಬುಗಿಲೆದ್ದಿದೆ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading