ಚಳ್ಳಕೆರೆ :
ತಾಲೂಕಿನ ಕಲಮರಹಳ್ಳಿ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ತೋಟಗಾರಿಕಾ ಕೇಂದ್ರ ಬಬ್ಬೂರು ಫಾರಂ ಹಿರಿಯೂರು ಇವರು ಪರಿಶಿಷ್ಟ ಜಾತಿ ರೈತರ ಸಬಲೀಕರಣ ಕರ್ನಾಟಕದಲ್ಲಿ ಸಿರಿಧಾನ್ಯ ಬೆಳೆಗಳ ಮೌಲ್ಯವರ್ಧನೆ ಕುರಿತು ರೈತರಿಗೆ ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಜನಾಂಗದ ರೈತರಿಗೆ ರೈತ ಜಾಗೃತಿ ಮತ್ತು ತರಬೇತಿ ಕಾರ್ಯಾಗಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವು ಶ್ರೀಮುಕ್ತಾರಂಗ ಕಲಾವೇದಿಕೆ ಸಮಿತಿ ಟ್ರಸ್ಟ್ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ಅಚ್ಚುಕಟ್ಟಾಗಿ ನಡೆಯಿತು. ಕಾರ್ಯಕ್ರಮದ ಅತಿಥಿಗಳಾಗಿ ಬಂದಿದ್ದಂತಹ ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ.ನಂದಿನಿ ಮತ್ತು ಕುಮಾರಿ ವೀಣಾ ಕೃಷಿಗೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಮಾಹಿತಿ ನೀಡಿದರು.
ಸಿರಿಧಾನ್ಯ ಬೆಳೆಗಳ ಪ್ರಾಮುಖ್ಯತೆ, ಮಾರ್ಕೆಟ್ ಬೆಲೆ ಸಿರಿಧಾನ್ಯಗಳನ್ನು ಮೌಲ್ಯವರ್ಧಿತ ಆಹಾರವಾಗಿ ಬಳಸುತ್ತಿರುವುದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಮತ್ತು ಹೆಣ್ಣು ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಆಹಾರವಾಗಿದ್ದು ಮಳೆಯ ಆಶ್ರಿತವಾಗಿ ಸಿರಿಧಾನ್ಯಗಳನ್ನು ಲಾಭದಾಯಕವಾಗಿ ಬೆಳೆಯಬಹುದು ಸಿರಿಧಾನ್ಯಗಳನ್ನು ಹೆಚ್ಚು ಬೆಳೆಯುವ ಜಿಲ್ಲೆ ಚಿತ್ರದುರ್ಗ ಜಿಲ್ಲೆ ಎನ್ನುವುದರ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಟೇಲ್ ರಾಮಚಂದ್ರಪ್ಪ ಊರಿನ ಮುಖಂಡರುಗಳಾದ ಕೆ.ಟಿ.ತಿಪ್ಪೇಸ್ವಾಮಿ, ಮಾರಜ್ಜ,ಕಲಾ ಟ್ರಸ್ಟ್ ನ ರವಿಶಂಕರ ಮತ್ತು ಮಣಿಕಾಂತ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸಿರಿ-ಧಾನ್ಯಗಳ ಬಗ್ಗೆ ಪ್ರಶ್ನೋತ್ತರಗಳ ಮೂಲಕ ಜನಗಳೊಂದಿಗೆ ಚರ್ಚಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದರು.
ಈ ಸಮಯದಲ್ಲಿ ಪರಿಶಿಷ್ಟ ಜನಾಂಗದ ರೈತರಿಗೆ ಕೃಷಿ ವಿಶ್ವವಿದ್ಯಾನಿಲಯದಿಂದ ಸಾಮೆ ಬೀಜ, ರೈತರು ಕೆಲಸ ನಿರ್ವಹಿಸಲು ಸಲಿಕೆಯನ್ನು (ಗುದ್ದಲಿ) ಪ್ರಾಧ್ಯಾಪಕರಾದ ನಂದಿನಿ ಮತ್ತು ಪಟೇಲ್ ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ವಿತರಿಸಲಾಯಿತು.

About The Author
Discover more from JANADHWANI NEWS
Subscribe to get the latest posts sent to your email.