
ಚಳ್ಳಕೆರೆ ನ.4 ಶ್ರೀಮತಿ ಸಿರಿಯಮ್ಮ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಎಲಗಟ್ಟೆ ಗೊಲ್ಲರ ಹಟ್ಟಿಯ ಚಿಕ್ಕಣ್ಣ ನವರ ಪತ್ನಿ ಸಿರಿಯಮ್ಮ(೮೦ ವರ್ಷ)ನವರು ಅನಕ್ಷರಸ್ತೆಯಾಗಿದ್ದರೂ ಸಾವಿರಾರು ಪದಗಳ ಒಡತಿಯಾಗಿದ್ದಾರೆ
ಕಾಡುಗೊಲ್ಲರು ತಲತಲಾಂತರವಾಗಿ ಒಂದು ಪರಂಪರೆಯ ಚೌಕಟ್ಟಿನಲ್ಲಿ ಹಾಡಿಕೊಂಡು ಬಂದಿರುವ ಪದ
ಸಾಹಿತ್ಯವನ್ನು ಸೋಬಾನೆ ಪದಗಳು, ಕೋಲು ಪದಗಳು, ಗಗ್ಗರ ಪದಗಳು, ಈರುಗಾರರ ಕಥನಗಳು,
ಗಣೆ ಕಾವ್ಯಗಳು ಹಾಗೂ ಮಹಾಕಾವ್ಯಗಳೆಂದು ಸ್ಕೂಲವಾಗಿ ವರ್ಗೀಕಲಿಸಬಹುದು . ಸಿರಿಯಮ್ಮ ಕುರಿ
ಸಾಕಣೆ ಹಾಗೂ ಕೃಷಿ ಚಟುವಟಿಕೆಯ ನಡುವೆಯೂ ಕಾಡುಗೊಲ್ಲ ಬುಡಕಟ್ಟಿನ ಸಾಂಸ್ಕೃತಿಕ ನಾಯಕರಾದ ಎತ್ತಪ್ಪ ಜುಂಜಪ್ಪ ಕ್ಯಾತಪ್ಪ ಮಹಾಕಾವ್ಯಗಳನ್ನೂ ‘ಸಿರಿಯಣ್ಣ ‘ ಎಂಬ ಕಥನ
ಕಾವ್ಯವನ್ನು ಹಾಗೂ ಸೋಬಾನೆ ಪದಗಳನ್ನು ಲೀಲಾಜಾಲವಾಗಿ ಹಾಡಬಲ್ಲವರಾಗಿದ್ದಾರೆ . ತನ್ನ ಅಜ್ಜಿ ಹಾಗು ತಾಯಿಯಿಂದ ಪದಗಳನ್ನು ಕಲಿತು ಚಿಕ್ಕ ಪ್ರಾಯದಲ್ಲೇ ಹಾಡಲು ಆರಂಭಿಸಿದ ಸಿರಿಯಮ್ಮ
ಜಾನಪದ ಸರಸ್ವತಿ, ಜಾನಪದ ಕಣಜ ಎಂದೇ ನಾಡಿನಾದ್ಯಂತ ಖ್ಯಾತಿ ಪಡೆದಿದ್ದ ನಾಡೋಜ ಸಿರಿಯಜ್ಜಿಯ ಸಾಹಚರ್ಯದಿಂದ ಮತ್ತಷ್ಟು ಪದಗಳನ್ನು ತನ್ನ ಮನೋಭಿತ್ತಿಯಲ್ಲಿ
ತುಂಬಿಸಿಕೊಳ್ಳುತ್ತಾಳೆ . ಹೆಸರಾಂತ ಸಾಹಿತಿಗಳಾದ ಡಾ ಎ ಕೆ ರಾಮಾನುಜಂ, ಡಾ ಎಸ್ ಎಲ್ ಭೈರಪ್ಪ, ಡಾ ಹೆಚ್ ಎಲ್ ನಾಗೇಗೌಡ, ಡಾ ಕೃಷ್ಣಮೂರ್ತಿ ಹನೂರು ಮುಂತಾದ ಪ್ರಸಿದ್ಧ ಸಾಹಿತಿಗಳು ಸಿರಿಯಜ್ಜಿಯನ್ನು ಬೇಟಿಮಾಡಲು ಬಂದ ಸಂದರ್ಭಗಳನ್ನು ಸಿರಿಯಜ್ಜಿಯ
ಸಹವರ್ತಿಯಾಗಿದ್ದ ಸಿರಿಯಮ್ಮ ತುಂಬ ಮನೋಜ್ಞವಾಗಿ ನೆನಪುಗಳ ಬುತ್ತಿಯನ್ನು ಬಿಚ್ಚಿಡುತ್ತಾರೆ.
ಇಂತಹ ಸಂದರ್ಭಗಳು ಬಹುತೇಕ ಕಲಾವಿದರಿಗೆ ಲಭ್ಯವಾಗುವುದಿಲ್ಲ . ಲಭ್ಯವಾದರೂ ಆ ಸನ್ನಿವೇಶಗಳ
ಸ್ವಾರಸ್ಯವನ್ನು ಮಹತ್ವ ವನ್ನು ಗಂಭೀರ ವಾಗಿ ಪರಿಗಣಿಸುವುದಿಲ್ಲ . ಹೀಗಿರುವಾಗ ಸಿರಿಯಮ್ಮ ಮಾತ್ರ ಇವರೆಲ್ಲರಿಗಿಂತ ಭಿನ್ನ . ತಾನು ಕಂಡುಂಡಂತಹ ಗಣ್ಯ ಸಂಶೋಧಕ, ಸಾಹಿತಿಗಳ ಸನಿಹದಲ್ಲಿತನಗುಂಟಾದ ಸ್ವಾರಸ್ಯಕರ ಅನುಭವಗಳನ್ನು ತನ್ನ ಬಂದು ಬಳಗ ಹಾಗೂ ಆಸಕ್ತ ಜನರಿಗೆ ಚಾಚೂ
ತಪ್ಪದೆ ಹಂಚಿಕೊಳ್ಳುತ್ತಾರೆ .
ಭಾಷೆ ಮತ್ತು ಸಂಸ್ಕೃತಿಯ ಹಿನ್ನಲೆಯಲ್ಲಿ ಸಿರಿಯಮ್ಮನವರ ಪದಗಳಲ್ಲಿ ಚಿತ್ರದುರ್ಗ ಸೀಮೆಯ ಭಾಷಿಕ ಅನನ್ಯತೆಯನ್ನು ಪರಿಭಾವಿಸ ಬಹುದಾಗಿದೆ
ನಾಡೋಜ ಸಿರಿಯಜ್ಜಿಯ ನಂತರ ಇಂದಿನ ಯುವತಿಯರಿಗೆ ಪದಗಳನ್ನು ಕಲಿಸಿಕೊಡುವ
ಮೂಲಕ ತನ್ನ ನಂತರದ ಮುಂದಿನ ಪೀಳಿಗೆಗೆ ಪದಗಳನ್ನು ಹೊತ್ತೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಬೆಂಗಳೂರಿನ ನಾಡೋಜ ಸಿರಿಯಜ್ಜಿ
ಸಾಂಸ್ಕೃತಿಕ ಪ್ರತಿಷ್ಠಾನವು ೨೦೨೧ ರಲ್ಲಿ ರಾಜ್ಯ ಮಟ್ಟದ ಪ್ರತಿಷ್ಠಿತ ‘ಸಿರಿಬೆಳಗು’ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಸ್ತುತ ಕರ್ನಾಟಕ ಜಾನಪದ ಅಕಾಡೆಮಿ 2023-24 ನೇ ಸಾಲಿನ ವಾರ್ಷಿಕ ಗೌರವ
ಪ್ರಶಸ್ತಿ ನೀಡಿದೆ.
*****
ಡಾ ಮಲ್ಲಿಕಾರ್ಜುನ ಕಲಮರಹಳ್ಳಿ
ಸದಸ್ಯರು
ಕರ್ನಾಟಕ ಜಾನಪದ ಅಕಾಡೆಮಿ
ಬೆಂಗಳೂರು
About The Author
Discover more from JANADHWANI NEWS
Subscribe to get the latest posts sent to your email.