
ಹಿರಿಯೂರು :
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ಮಾಡದೇ ಮೂಗಿಗೆ ತುಪ್ಪ ಸವರುವ ನಾಟಕವನ್ನು ಮಾಡುತ್ತಿದೆ ಎಂಬುದಾಗಿ ತಾಲ್ಲೂಕು ಜೆ.ಡಿ.ಎಸ್. ಘಟಕದ ಅಧ್ಯಕ್ಷರಾದ ಹನುಮಂತರಾಯಪ್ಪ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆಸಿದ ಒಳ ಮೀಸಲಾತಿ ಸಾಧಕ-ಬಾಧಕಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಮಾದಿಗರು ಬಹುಸಂಖ್ಯಾತರಾಗಿದ್ದು, ಸಂಖ್ಯಾ ಬಲದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಈ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ನಿಕೃಷ್ಟ ಸ್ಥಿತಿಯಲ್ಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ಸುಪ್ರಿಮ್ ಕೋರ್ಟ್ನ 7 ಸದಸ್ಯರ ಪೀಠದ ತೀರ್ಪನ್ನು ಅಗೌರವಿಸಿ ಕಾನೂನಿನ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.
ಹರಿಯಾಣದಲ್ಲಿ ಒಳಮೀಸಲಾತಿ ಜಾರಿ ಮಾಡಲಾಗಿದೆ. ತೆಲಂಗಾಣದಲ್ಲಿಯೂ ಸಹ ಚಾಲ್ತಿಯಲ್ಲಿದೆ. ಆದರೆ, ರಾಜ್ಯದಲ್ಲಿ ಬಹುಸಂಖ್ಯಾತರಾದ ಮಾದಿಗರನ್ನು ಮತ ಬ್ಯಾಂಕ್ ಮಾಡಿಕೊಂಡಿದ್ದಾರೆ. ನಾಗಮೋಹನ್ ದಾಸ್ ವರದಿಯಲ್ಲೂ ಮಾದಿಗರು ಬಹುಸಂಖ್ಯಾತರಿದ್ದಾರೆ ಎಂದು ಉಲ್ಲೇಖಿಸಲಾಗಿದ್ದು ಒಳಮೀಸಲಾತಿ ನೀಡಬಹುದೆಂದಿದ್ದಾರೆ.
ಚಿತ್ರದುರ್ಗದಲ್ಲಿ ನಡೆದ ಚುನಾವಣೆ ಸಭೆಯೊಂದರಲ್ಲಿ 6 ನೇ ಗ್ಯಾರಂಟಿಯಾಗಿ ಒಳಮೀಸಲಾತಿ ಜಾರಿ ಮಾಡುತ್ತೇನೆ ಎಂದಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು. ಒಳಮೀಸಲಾತಿ ಜಾರಿ ಮಾಡಬೇಕು ಇಲ್ಲವೇ ಕುರ್ಚಿಬಿಟ್ಟು ತೊಲಗಬೇಕು ಎಂಬುದಾಗಿ ಒತ್ತಾಯಿಸಿದರು.
ಮುಖಂಡರಾದ ಕೆ.ಪಿ.ಶ್ರೀನಿವಾಸ್ ಮಾತನಾಡಿ, ಮಾಜಿಸಚಿವ ಎಚ್. ಆಂಜನೇಯರವರು ಸಿ.ಎಂ.ಸಿದ್ದರಾಮಯ್ಯನವರಿಗೆ ಸನ್ಮಾನ ಮಾಡುವುದು ಯಾವ ಪುರುಷಾರ್ಥಕ್ಕೆ ಎಂದು ಸ್ಪಷ್ಟಪಡಿಸಬೇಕು. ದತ್ತಾಂಶದ ನೆಪ ಹೇಳಿ ರಾಜಕೀಯ ಲಾಭಕ್ಕಾಗಿ ಮೂರು ತಿಂಗಳು ಒಳಮೀಸಲಾತಿ ಜಾರಿಯನ್ನು ಮುಂದೂಡಿದ್ದಾರೆ.
ಒಳಮೀಸಲಾತಿ ಜಾರಿಯವರೆಗೆ ಮಾದಿಗ ಸಮುದಾಯ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿ ಯವರಿಗೆ ಹಾರ ತುರಾಯಿ ಹಾಕುವುದು ನಿಲ್ಲಿಸಬೇಕು. ಸರ್ಕಾರಿ ನೇಮಕಾತಿಯನ್ನು ಸ್ಪಷ್ಟವಾಗಿ ತಡೆಹಿಡಿಯಬೇಕು ಎಂಬುದಾಗಿ ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹನುಮಂತಪ್ಪ ಬೀರೇನಹಳ್ಳಿ, ಹನುಮಂತರಾಯಅಂಬಲಗೆರೆ, ಮಾರುತೇಶ್ ಕೂನಿಕೆರೆ, ಕರಿಯಣ್ಣ ಬೋರನಕುಂಟೆ, ಮಂಜುನಾಥ್ ಅಂಬಲಗೆರೆ, ರಾಘವೇಂದ್ರ ಈಶ್ವರಗೆರೆ, ಶಿವು ಖಂಡೇನಹಳ್ಳಿ, ಕದುರಪ್ಪಶಿಡ್ಲಯ್ಯನಕೋಟೆ, ಆರ್.ಮಹೇಶ್, ರುದ್ರಪ್ಪ ಗುಯಿಲಾಳು, ರಾಘುಓಬಳಾಪುರ, ಜಯಣ್ಣಮೇಟಿಕುರ್ಕೆ, ಇರ್ಫಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.