ಚಿತ್ರದುರ್ಗಮಾ.04:
ಜಾನಪದ ಕಲಾ ಪ್ರಕಾರಗಳು ನಡವಳಿಕೆ ಬದಲಾಯಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ ಎಂದು ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ಡಿ.ಎಂ.ಅಭಿನವ ಹೇಳಿದರು.
ನಗರದ ವೆಂಕಟೇಶ್ವರ ಬಡಾವಣೆಯ ಕೊಳಚೆ ಪ್ರದೇಶದಲ್ಲಿ ಮಂಗಳವಾರ ರಾಷ್ಟ್ರೀಯ ಆರೋಗ್ಯ ಅಭಿಯಾನ ಆರೋಗ್ಯ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಜಾನಪದ ಕಲಾ ಪ್ರಕಾರಗಳ ಕಿರು ನಾಟಕಗಳ ಮೂಲಕ ದುಸ್ತರವರ್ಗದ ಜನಸಂಖ್ಯೆ ಹೆಚ್ಚಿರುವ ಜಾಗದಲ್ಲಿ ಜಾನಪದ ಕಲಾತಂಡಗಳ ಮೂಲಕ ಕಿರು ನಾಟಕ ಪ್ರದರ್ಶನ ನೀಡಿ ಆರೋಗ್ಯ ಇಲಾಖೆಯ ಸೇವೆಗಳನ್ನು ಬಲಪಡಿಸುವ ಕಾರ್ಯಕ್ರಮಕ್ಕೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ತಾಯಿ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಬಹು ಪ್ರಮುಖ ಮಾನದಂಡಗಳಾದ ತಾಯಿ ಮರಣ, ಶಿಶುಮರಣ ನಿಯಂತ್ರಣ, ಬಾಲ್ಯ ವಿವಾಹ ತಡೆಗಟ್ಟುವಿಕೆ, ಭ್ರೂಣ ಲಿಂಗ ಪತ್ತೆ ಕಾಯ್ದೆ ಅನುಷ್ಠಾನ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜನರ ವರ್ತನೆಗಳು ನಡವಳಿಕೆಗಳು ಬದಲಾವಣೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಜಾನಪದ ಕಲಾ ಪ್ರಕಾರಗಳ ಕಿರು ನಾಟಕಗಳ ಮೂಲಕ ಪ್ರದರ್ಶನವ ನೀಡಿ, ಜನರ ಕುಟುಂಬಗಳಲ್ಲಿ ಜರುಗುವ ಪರಿಸ್ಥಿತಿಯನ್ನು ನಾಟಕಗಳ ಮೂಲಕ ಪ್ರತಿಫಲಿಸಿ ಘಟನೆಗಳನ್ನು ನೆನಪು ಮಾಡುತ್ತಾ ಪರಿವರ್ತನೆ ತರುವಂತ ಒಂದು ಪ್ರಯತ್ನವಾಗಿದೆ. ಅಲ್ಲದೆ ಜನರ ಭಾವನೆಗಳ ಮೇಲೆ ಪರಿಣಾಮಕಾರಿಯಾಗಿ ಧನಾತ್ಮಕ ಬದಲಾವಣೆ ತರುವಂತಹ ಆರೋಗ್ಯ ಸೇವೆಗಳ ಮಾಹಿತಿಯನ್ನು ಜಾನಪದದೊಂದಿಗೆ ಸಮೀಲನಗೊಳಿಸಿ ಕಿರು ನಾಟಕಗಳನ್ನು ಪ್ರದರ್ಶಿಸಿ ಆರೋಗ್ಯ ಸೇವೆಗಳನ್ನು ಬಲಪಡಿಸುವುದಾಗಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯಕ್ ಮಾತನಾಡಿ, ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲೆಯ ಪ್ರತಿ ತಾಲ್ಲೂಕಿಗೆ ಐದು ನಾಟಕ ಪ್ರದರ್ಶನಗಳಂತೆ ಒಟ್ಟು 30 ನಾಟಕ ಪ್ರದರ್ಶನಗಳು ಎಲ್ಲೆಲ್ಲಿ ತಾಯಿ ಮರಣ, ಶಿಶುಮರಣ ಹೆಚ್ಚು ಸಂಭವಿಸುತ್ತಿದೆಯೋ ಅಂತಹ ಗ್ರಾಮಗಳನ್ನು ಆಯ್ದು ನಡೆಸಲಾಗುತ್ತದೆ ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ತಾಯಿ ಮರಣ, ಶಿಶುಮರಣ ನಿಯಂತ್ರಿಸುವಲ್ಲಿ ಜನರಿಗೆ ಜಾಗೃತಿ ಬೇಕಾಗಿರುತ್ತದೆ. ನಾಟಕಗಳು ಪರಿವರ್ತನೆ ತರಬಲ್ಲವೂ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಜಿಲ್ಲಾ ಪೋಷಣ್ ಅಭಿಯಾನದ ವ್ಯವಸ್ಥಾಪಕ ಕರಕಪ್ಪ ಮೇಟಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಜಾನಕಿ, ಬಿ.ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀನಿವಾಸ್, ಗುರುಮೂರ್ತಿ, ಪ್ರವೀಣ್, ಆರೋಗ್ಯ ಸುರಕ್ಷತಾ ಅಧಿಕಾರಿ ವತ್ಸಲಮ್ಮ, ಆಶಾ ಕಾರ್ಯಕರ್ತೆಯರು, ಕಲಾವಿದರ ತಂಡ, ಸಾರ್ವಜನಿಕರು ನಾಟಕ ಪ್ರದರ್ಶನದಲ್ಲಿ ಭಾಗವಹಿಸಿದ್ದರು.


About The Author
Discover more from JANADHWANI NEWS
Subscribe to get the latest posts sent to your email.