ಡೆಂಕನಮರಡಿಯಲ್ಲಿ ಮೈಲಾರ ಲಿಂಗೇಶ್ವರ ಜಾತ್ರಾ ಮಹೋತ್ಸವ: 2026ನೇ ಸಾಲಿನ ಕಾರ್ಣಿಕ ಹೊರಬಿದ್ದು ಜನರಲ್ಲಿ ಆಶಾಭಾವನೆ
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಡೆಂಕನಮರಡಿಯಲ್ಲಿ ನಡೆದ ಮೈಲಾರ ಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ 2026ನೇ ಸಾಲಿನ ಕಾರ್ಣಿಕೋತ್ಸವ ಬುಧವಾರ ಸಂಜೆ ಸಂಭ್ರಮದಿಂದ ನಡೆಯಿತು. ಪರಂಪರೆಯಂತೆ ನಡೆದ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ರಾಮಜ್ಜನವರು “ಸಂಪಾಯಿತಲೇ ಪರಾಕ್” ಎಂಬ ದೇವವಾಣಿಯನ್ನು ನುಡಿದರು.
ಈ ಮಹತ್ವದ ಕ್ಷಣಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಸಾಕ್ಷಿಯಾದರು. ಕಾರ್ಣಿಕ ನುಡಿಯ ಅರ್ಥದಂತೆ ಪ್ರಸಕ್ತ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದ್ದು, ಸಮೃದ್ಧ ಬೆಳೆಗಳು ಬೆಳೆಯುವ ಜೊತೆಗೆ ಜನಜೀವನ ಸುಗಮವಾಗಿರಲಿದೆ ಎಂಬ ನಂಬಿಕೆ ವ್ಯಕ್ತವಾಗಿದೆ. ಜೊತೆಗೆ ಯಾವುದೇ ದೊಡ್ಡ ಮಟ್ಟದ ಅಶಾಂತಿ ಅಥವಾ ತಲ್ಲಣಗಳು ಉಂಟಾಗುವ ಸಾಧ್ಯತೆ ಕಡಿಮೆ ಎಂಬ ಸಂದೇಶವೂ ಈ ಕಾರ್ಣಿಕ ನುಡಿಯಲ್ಲಿ ಅಡಗಿದೆ ಎಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿವರ್ಷ ನಡೆಯುವ ಮೈಲಾರ ಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಕಾರ್ಣಿಕೋತ್ಸವವನ್ನು ಭಕ್ತರು ಭವಿಷ್ಯದ ಸೂಚಕವಾಗಿ ಪರಿಗಣಿಸುತ್ತಾರೆ. ಈ ಬಾರಿ ಹೊರಬಿದ್ದ ಕಾರ್ಣಿಕ ನುಡಿ ಕೃಷಿಕರು ಸೇರಿದಂತೆ ಸಾರ್ವಜನಿಕರಲ್ಲಿ ಹೊಸ ಆಶಾಭಾವನೆ ಮೂಡಿಸಿದ್ದು, ಎಲ್ಲೆಡೆ ಸಂತಸ ವ್ಯಕ್ತವಾಗಿದೆ.
ಈ ವರ್ಷದ ಜಾತ್ರಾ ಮಹೋತ್ಸವವು ಜನವರಿ 25ರಿಂದ ಫೆಬ್ರವರಿ 5ರವರೆಗೆ ನಡೆದಿದ್ದು, ಲಕ್ಷಾಂತರ ಭಕ್ತರು ಭಾಗವಹಿಸಿದ್ದರು. ಶತಮಾನಗಳ ಇತಿಹಾಸ ಹೊಂದಿರುವ ಮೈಲಾರ ಲಿಂಗೇಶ್ವರ ಜಾತ್ರೆ ಧಾರ್ಮಿಕ ಆಚರಣೆಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಪ್ರಸಿದ್ಧಿಯಾಗಿದ್ದು, ಈ ಬಾರಿ ಕೂಡ ಸಂಭ್ರಮ ಮತ್ತು ಭಕ್ತಿಭಾವದಿಂದ ಜಾತ್ರೆ ಯಶಸ್ವಿಯಾಗಿ ಸಂಪನ್ನವಾಯಿತು.
About The Author
Discover more from JANADHWANI NEWS
Subscribe to get the latest posts sent to your email.