ಚಳ್ಳಕೆರೆ ಜ.3
ಜಾತಿಮುಕ್ತ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಸನ್ನತ್ತಿ ಪಂಚಶೀಲ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದು ಭಂತೆ ಭೋಧಿದತ್ತ ಹೇಳಿದರು.
ಭೌದ್ಧ ಐತಿಹಾಸಿಕ ಕ್ಷೇತ್ರ ರಾಜ್ಯದ ಗುಲ್ಬರ್ಗದ ಸನ್ನತ್ತಿಯಿಂದ ಬೆಂಗಳೂರು ವಿಧಾನಸೌಧದವರೆಗೆ 800 ಕಿಮೀ ಪಾದಯಾತ್ರೆ ನಡೆಸುತ್ತಿರುವ ವೇಳೆ ಗುರುವಾರ ತಡರಾತ್ರಿ ಚಳ್ಳಕೆರೆ ನಗರಕ್ಕೆ ಆಗಮಿಸಿದ ವೇಳೆ ಮಾತನಾಡಿದರು.
ವಿಶ್ವ ಶಾಂತಿಗಾಗಿ ಮತ್ತು ಸನ್ನತ್ತಿಯ ಸಮಗ್ರ ಅಭಿವೃದ್ದಿಗಾಗಿ ಪಾದಯಾತ್ರೆ ಮಾಡಲಾಗುತ್ತಿದೆ. ಬುದ್ಧನ ತತ್ವ ಸಿದ್ಧಾಂತದಂತೆ ಮನುಷ್ಯನು ಮನುಷ್ಯನನ್ನಾಗಿ ನೋಡುವ ಸಮಾನತೆ ಬರಬೇಕಿದೆ. ಇದಕ್ಕೆ ಬುದ್ಧ ಧಮ್ಮನ ಧರ್ಮ ಬಲವರ್ಧನೆ ಆಗಬೇಕು. ಸನ್ನತ್ತಿ ಅಭಿವೃದ್ದಿ ಪ್ರಾಧಿಕಾರದ ಯೋಜನೆಗಳನ್ನು ಆಂಧ್ರದ ಬುದ್ಧನ ಮಾದರಿಯಲ್ಲಿ 200ಎಕರೆ ಪ್ರದೇಶದಲ್ಲಿ ಅಭಿವೃದ್ದಿಪಡಿಸಬೇಕು. ಪ್ರವಾಸಿ ತಾಣವಾಗಿ ಮಾಡಲು 500 ಕೋಟಿ ಅನುದಾನ ನಿಗಧಿ ಮಾಡಬೇಕು. ಫೆ.12ರಂದು ಸರ್ಕಾರದ ವತಿಯಿಂದ ಸಾಮ್ರಾಟ್ ಅಶೋಕನ ಸನ್ನತ್ತಿ ಉತ್ಸವ ಆಚರಣೆ ಮಾಡಬೇಕು. ಬುದ್ಧ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಭಗವಾನ್ ಬುದ್ಧರ ಜಯಂತಿ ಆಚರಣೆಗೆ ಸರ್ಕಾರಿ ರಜೆ ಘೋಷಣೆ ಮಾಡಬೇಕು. ರಾಜ್ಯದ ಪ್ರತಿ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಬುದ್ಧ ವಿಹಾರ ನಿರ್ಮಾಣಕ್ಕೆ ಕನಿಷ್ಟ 5ಎಕರೆ ಜಮೀನು ಕಾಯ್ದಿರಿಸಬೇಕು. ರಾಜ್ಯದಲ್ಲಿ ದೊರೆತಿರುವ ಸಾಮ್ರಾಟ್ ಅಶೋಕರ ಶಿಲಾ ಶಾಸನಗಳನ್ನು ಸರ್ಷಕಿಸಲು ಹೆಚ್ಚಿನ ಕಾಳಜಿ ವಹಿಸಬೇಕು. ಬುದ್ಧ ಮಲಗಿದ ಯಾದಗಿರಿ ಜಿಲ್ಲೆಯ ಬೆಟ್ಟ ಸಗರಾದ್ರಿ ಸ್ಥಳವನ್ನು ಪಾರಂಪರಿಕ ತಾಣವನ್ನಾಗಿ ಥೀಮ್ ಪಾರ್ಕ್ ನಿರ್ಮಾಣಕ್ಕೆ 50 ಎಕರೆ ಭೂಮಿ ಮಂಜೂರು ಮಾಡಬೇಕೆಂದು ಪಾದಯಾತ್ರೆ ಮೂಲಕ ಮುಖ್ಯಮುಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಬುದ್ಧ ವೇದಿಕೆ ಅಧ್ಯಕ್ಷ ಮೈತ್ರಿ ದ್ಯಾಮಣ್ಣ ಮಾತನಾಡಿ, ಅಶೋಕನ ಕಾಲಾವಧಿಯ ಭೌದ್ದ ಧಮ್ಮ ಮೌಲ್ಯತೆ ಕುರಿತು ಸಂಶೋಧಕ ಹುಲ್ಲೂರು ಶ್ರೀನಿವಾಸ್ ಜೋಯಿಸರ ಗ್ರಂಥಗಳಲ್ಲಿ ವಿಸ್ತಾರವಾಗಿ ಬರೆಯಲಾಗಿದೆ. ಅಶೋಕನ ಕಾಲಾವಧಿಯಲ್ಲಿ ನಡೆದ ಮೂರನೇ ಸಂಗೀತಿ(ಸಮ್ಮೇಳನ) ಪಾಟಲೀಪುತ್ರಕ್ಕೆ ಚಿತ್ರದುರ್ಗದ ಚಂದ್ರವಳ್ಳಿಯಿಂದ 10 ಸಾವಿರ ಥೆರಾರರು ಭಾಗವಹಿಸಿದ್ದರು ಎನ್ನುವ ಮಾಹಿತಿ ನೀಡಲಾಗಿದೆ. ಚಿತ್ರದುರ್ಗದ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನ ಮಹಾಯಾನ ಭೌದ್ದರ ವಿಹಾರವಾಗಿತ್ತು. ಮಾನವೀಯ ಅಂಶಗಳಾದ ಸಮಾನತೆ, ಸಮಬಾಳು, ಸಹೋದರತ್ವ, ಕರುಣೆ ಮತ್ತು ಮೈತ್ರಿಯ ಅಸ್ಮಿತೆಯಾಗಿರುವ ಧಮ್ಮವನ್ನು 1956ರಲ್ಲಿ ಅಂಬೇಡ್ಕರ್ ಅವರು ಸುಮಾರು 5 ಲಕ್ಷ ಅನುಯಾಯಿಗಳೊಂದಿಗೆ ಸೇರ್ಪಡೆಯಾಗಿರುವುದು ಒಂದು ಇತಿಹಾಸವಾಗಿದೆ ಎಂದು ಹೇಳಿದರು.
ಭಂತೆ ಭೋಧಿತಿಸ್ಸೆ, ಭಂತೆ ಅಜಿಪಾಲ, ಭಂತೆ ಯಶ್, ದಸಂಸ ಸಂಚಾಲಕ ಟಿ. ವಿಜಯಕುಮಾರ್, ಭೀಮನಕೆರೆ ಶಿವಮೂರ್ತಿ, ಕೆ.ಬಿ. ನಾಗರಾಜ, ಬ್ಯಾನರ್ಜಿ, ಎನ್. ಪ್ರಕಾಶ್, ವಿನೋದ್ಕುಮಾರ್, ಬಿ.ತಿಪ್ಪೇಸ್ವಾಮಿ, ಆರ್. ಭದ್ರಿ, ಜಾಲಿಮಂಜು, ಎಂ.ಎಚ್. ಪ್ರಭು, ಆರ್. ದ್ಯಾಮರಾಜ್, ನನ್ನಿವಾಳ ನಾಗರಾಜ, ಎನ್. ಹೊನ್ನೂರುಸ್ವಾಮಿ, ಹೊನ್ನೂರು ಮಾರಣ್ಣ, ಎಚ್. ಮಹಾಂತೇಶ್ ಇತರರಿದ್ದರು.







About The Author
Discover more from JANADHWANI NEWS
Subscribe to get the latest posts sent to your email.