
ಚಿತ್ರದುರ್ಗ ಜುಲೈ.02:
ಎಸ್.ಹೆಚ್.ಜಿ (ಸ್ವ ಸಹಾಯ ಗುಂಪು) ಸದಸ್ಯರನ್ನು ಸಾಮಾಜಿಕ ವಿಮಾ ಯೋಜನಗಳಾದ ಪಿ.ಎಂ.ಜೆ.ಜೆ.ಬಿ.ವೈ (ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆ) ಪಿ.ಎಂ.ಎಸ್.ಬಿ.ವೈ (ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆ) ಹಾಗೂ ಎ.ಪಿ.ವೈ (ಅಟಲ್ ಪಿಂಚಣಿ ಯೋಜನೆ) ಅಡಿಯಲ್ಲಿ ತರುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಸಿ.ಎಸ್.ಗಾಯಿತ್ರಿ ಸೂಚಿಸಿದರು.
ಚಿತ್ರದುರ್ಗ ತಾಲ್ಲೂಕಿನ ತುರುವನೂರು ಗ್ರಾಮದ ರಾಮಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್, ಎನ್.ಆರ್.ಎಲ್.ಎಂ (ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ) ಹಾಗೂ ತುರುವನೂರು ಕೆನರಾ ಬ್ಯಾಂಕ್ ಶಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ, 3 ತಿಂಗಳ ಸಾಮಾಜಿಕ ಭದ್ರತಾ ಯೋಜನೆಗಳ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸುವುದರ ಜೊತೆಗೆ, ಪ್ರತಿ ಕುಟುಂಬದ ಸದಸ್ಯರು ಸಾಮಾಜಿಕ ಭದ್ರತಾ ಯೋಜನೆ ಲಾಭ ಪಡೆಯುವಂತೆ ಬ್ಯಾಂಕುಗಳು ಕಾರ್ಯನಿರ್ವಹಿಸಬೇಕು. ಇದರೊಂದಿಗೆ ಜಿಲ್ಲಾ ಪಂಚಾಯಿತಿ ಎನ್.ಆರ್.ಎಲ್.ಎಂ ಸಂಯೋಜಕರು ಸ್ವ ಸಹಾಯ ಗುಂಪುಗಳ ಸದಸ್ಯರ ಕುಟುಂಬದವರನ್ನು ಸಹ ಸಾಮಾಜಿಕ ವಿಮಾ ಯೋಜನೆಯಡಿ ನೊಂದಣಿ ಮಾಡಲು ಜಾಗೃತಿ ಮೂಡಿಸಬೇಕು ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ರಾಘವೇಂದ್ರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಆರ್ಥಿಕತೆ ಒಳಗೊಳ್ಳುವಿಕೆ ಮಟ್ಟ ಹೆಚ್ಚಿಸಿ, ಸಾಮಾಜಿಕ ಭದ್ರತೆ ಹಾಗೂ ವಿಮಾ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಜುಲೈ 1 ರಿಂದ ಸೆಪ್ಟಂಬರ್ 30 ವರೆಗೆ 3 ತಿಂಗಳ ಕಾಲ ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಸಾಮಾಜಿಕ ವಿಮಾ ಯೋಜನೆಗಳ ನೊಂದಣಿ ಹೆಚ್ಚಿನ ಶ್ರಮ ವಹಿಸಬೇಕು ಎಂದರು.
3 ತಿಂಗಳ ಅಭಿಯಾನದಲ್ಲಿ ಜನಧನ್ ಯೋಜನೆಯಡಿ ಹೊಸ ಬ್ಯಾಂಕ್ ಖಾತೆ ತೆರೆಯಲಾಗುವುದು. ಹಳೆಯ ಬ್ಯಾಂಕ್ ಖಾತೆಗಳ ಇ-ಕೆವೈಸಿ ಮಾಡಲಾಗುವುದು. ಸಾಮಾಜಿಕ ವಿಮಾ ಯೋಜನೆಗಳು ಹಾಗೂ ಬ್ಯಾಂಕ್ಗಳ ಹೆಸರಿನಲ್ಲಿ ಎಸಗುವ ಡಿಜಿಟಲ್ ವಂಚನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ರಾಘವೇಂದ್ರ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ, ಎನ್.ಆರ್.ಎಲ್.ಎಂ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಯೋಗೀಶ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಖಲೀಮ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಕುಶಾಲ್ ಕುಮಾರ್.ಕೆ.ಓ, ರುಡ್ಸೆಟ್ ಸಂಪನ್ಮೂಲ ವ್ಯಕ್ತಿ ಉದಯ್ ಕುಮಾರ್, ಆರ್ಥಿಕ ಸಲಹೆಗಾರ ತಿಪ್ಪೇಸ್ವಾಮಿ ಸೇರಿದಂತೆ ಮತ್ತಿರರ ಉಪಸ್ಥಿತರಿದ್ದರು.

About The Author
Discover more from JANADHWANI NEWS
Subscribe to get the latest posts sent to your email.