ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ:
ಪಟ್ಟಣದ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ೬೪ ಮಂದಿ ಪೌರಕಾರ್ಮಿಕರಿಗೆ ನಿವೇಶನ ನೀಡಲಾಗುವುದು. ಜೊತೆಗೆ ಪಟ್ಟಣದ ಅರ್ಹ ಮೂಲ ನಿವಾಸಿಗಳಾದ ನಿವೇಶನ ರಹಿತ ಬಡ ಹಾಗೂ ನಿರ್ಗತಿಕರಿಗೆ ಹೊಸದಾಗಿ ಅರ್ಜಿ ಕರೆದು ಆಯ್ಕೆ ಪ್ರಕ್ರಿಯೆ ಮೂಲಕ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಶಾಸಕ ಹಾಗೂ ರಾಜ್ಯ ಆಹಾರ ನಿಗಮದ ಅಧ್ಯಕ್ಷ ಬಿ.ಜಿ. ಗೋವಿಂದಪ್ಪ ತಿಳಿಸಿದರು.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಮಂಗಳವಾರ ಸಂಜೆ ನಡೆದ ನಗರ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಗುರುವಿನಕಲ್ಲು ಗ್ರಾಮದ ಸರ್ವೆ ನಂಬರ್ ೮೬ರಲ್ಲಿ ಇರುವ ೨೨ ಎಕರೆ ಜಮೀನಿನ ನಕ್ಷೆಯನ್ನು ಈಗಾಗಲೇ ಅನುಮೋದನೆಗಾಗಿ ಕಳುಹಿಸಲಾಗಿದೆ. ನೀಲಿನಕ್ಷೆ ಅನುಮೋದನೆಯಾದ ತಕ್ಷಣವೇ ನಿವೇಶನ ರಹಿತರಿಗೆ ಅರ್ಜಿ ಆಹ್ವಾನಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.
ಇದೇ ವೇಳೆ ಕೆಲವರು ನಿವೇಶನ ಕೊಡಿಸುವುದಾಗಿ ಹೇಳಿ ಜನರನ್ನು ಮೋಸಗೊಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ ಅವರು, ಯಾರೂ ಮಧ್ಯವರ್ತಿಗಳಿಗೆ ಮಣೆ ಹಾಕಬಾರದು. ನೇರವಾಗಿ ಪುರಸಭೆಗೆ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಮಾತ್ರ ನಿವೇಶನ ನೀಡಲಾಗುವುದು. ಹೊರಗಡೆಯಿಂದ ಬಂದವರಿಗೆ ಯಾವುದೇ ಕಾರಣಕ್ಕೂ ನಿವೇಶನ ನೀಡಲಾಗುವುದಿಲ್ಲ. ನಗರದಲ್ಲಿ ಬಹು ವರ್ಷಗಳಿಂದ ವಾಸಿಸುತ್ತಿರುವ ಮೂಲ ನಿವಾಸಿಗಳಿಗೆ ಮಾತ್ರ ನಿವೇಶನ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಎನ್. ನಾಗಭೂಷಣ್, ಆಶ್ರಯ ಸಮಿತಿ ಸದಸ್ಯರಾದ ಸೈಯದ್, ಮೆಹಬೂಬ್, ನಿಖಿಲ್ ನಾಯ್ಕ, ಅರುಣಕುಮಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.