ಹಿರಿಯೂರು :
ಕನ್ನಡ ನಾಡಿಗೆ ಸುಮಾರು 2 ಸಾವಿರ ವರ್ಷಗಳ ಪ್ರಾಚೀನ ಪರಂಪರೆ ಹೊಂದಿದ್ದು, ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಪ್ರಕೃತಿ, ಪರಿಸರ, ಭಾಷೆ, ಬರಹ ಧರ್ಮ ಇವೆಲ್ಲವುಗಳಲ್ಲಿ ಮಹತ್ತರವಾದ ಒಲವು-ಚೆಲುವುಗಳನ್ನು ಪಡೆದಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿದ್ದು, ರಾಜ್ಯ ಸರ್ಕಾರವು ಕನ್ನಡನಾಡು-ನುಡಿ,ಕಲೆ, ಸಂಸ್ಕೃತಿಯನ್ನು ಬೆಳೆಸಲು ಕಟಿಬದ್ಧವಾಗಿದೆ ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ರಾಜೇಶ್ ಕುಮಾರ್ ಹೇಳಿದರು.
ನಗರದ ನೆಹರು ಮೈದಾನದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ನಗರಸಭೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ನಂತರ ಅವರು ಮಾತನಾಡಿದರು.
ಭಾರತದ ಸ್ವತಂತ್ರ್ಯದ ನಂತರ ಹರಿದು ಹಂಚಿಹೋಗಿದ್ದ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ, “ಮೈಸೂರುರಾಜ್ಯ” ಎಂದು ಕರೆಯಲಾಯಿತು, ಆನಂತರ 1973 ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ್ ಅರಸು ರವರು ಮೈಸೂರು ರಾಜ್ಯಕ್ಕೆ “ಕರ್ನಾಟಕ”ವೆಂದು ಮರುನಾಮಕರಣ ಮಾಡಿದರು ಎಂದರಲ್ಲದೆ,
ಈ ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾಯರು, ಸಾಹಿತಿಗಳಾದ ಕುವೆಂಪು, ಬಿ.ಎಂ.ಶ್ರೀಕಂಠಯ್ಯ, ಶಿವರಾಮ್ ಕಾರಂತರು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಅ.ನ.ಕೃಷ್ಣರಾಯರು ಸೇರಿದಂತೆ ಅನೇಕ ಗಣ್ಯರು ಜೀವನವಿಡೀ ಹೋರಾಡಿದ್ದು, ಅವರ ಹೋರಾಟದ ಫಲವಾಗಿ ಕನ್ನಡನಾಡು ರಚನೆಯಾಗಿದೆ ಎಂದರು.
ಕರ್ನಾಟಕ ರಾಜ್ಯವು ಕಲೆ, ಸಾಹಿತ್ಯ, ನಾಟಕರಂಗ, ಸಂಸ್ಕೃತಿಯಲ್ಲಿ ಸಂಪದ್ಭರಿತ ರಾಜ್ಯವಾಗಿದೆ, ಸಾಹಿತ್ಯ, ಕಲೆ, ನಾಟಕರಂಗ, ಸಂಗೀತ ಕ್ರೀಡಾ ಕ್ಷೇತ್ರಗಳಲ್ಲಿ ಅನೇಕ ಮಹಾನ್ ವ್ಯಕ್ತಿಗಳು ಈ ನಾಡಿನಲ್ಲಿ ಜನಿಸಿದ್ದಾರೆ, ಕನ್ನಡ ನಾಡು-ನುಡಿ, ಸಾಹಿತ್ಯಕ್ಕಾಗಿ ದುಡಿದ ಮಹಾನ್ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ
ಪ್ರತಿವರ್ಷ ನವಂಬರ್ 1 ರಂದು ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ಈ ರಾಜ್ಯೋತ್ಸವ ದಿನದಂದು ಕನ್ನಡ ನಾಡು-ನುಡಿ, ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸಾಧನೆ ಮಾಡಿದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಮೂಲಕ ರಾಜ್ಯ ಸರ್ಕಾರ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಲು ಮುಂದಾಗಿರುತ್ತದೆ ಎಂದರಲ್ಲದೆ,
ಕರ್ನಾಟಕ ರಾಜ್ಯ ಸರ್ಕಾರವು ಇದೇ ಡಿಸೆಂಬರ್ 20, 21, 22 ರಂದು ಮಂಡ್ಯದಲ್ಲಿ 87 ನೇ ಅಖಿಲಭಾರತ ಸಾಹಿತ್ಯ ಸಮ್ಮೇಳನವನ್ನು ನಡೆಸಲು ತೀರ್ಮಾನಿಸಲಾಗಿದ್ದು, ಇದರ ಅಂಗವಾಗಿ “ಕನ್ನಡರಥಯಾತ್ರೆ”ಯು ನವಂಬರ್ 31 ರ ಗುರುವಾರದಂದು ಹಿರಿಯೂರಿನಿಂದ ಹೊಸದುರ್ಗ ಮಾರ್ಗವಾಗಿ ಸಂಚರಿಸಿರುವುದನ್ನು ನಾವು ಈ ದಿನ ಸ್ಮರಿಸಬಹುದಾಗಿದೆ ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಕನ್ನಡ ನಾಡು-ನುಡಿ, ಭಾಷೆ ಮತ್ತು ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ಪತ್ರಿಕೋದ್ಯಮದಿಂದ ಪ್ರಕಾಶ್ ಬಬ್ಬೂರು, ಬಸವರಾಜ್ ಖಂಡೇನಹಳ್ಳಿ, ಸಾಹಿತ್ಯ ಕ್ಷೇತ್ರದಿಂದ ರವೀಶ್, ಶಫೀವುಲ್ಲಾ, ರಂಗೋಲಿ ಕ್ಷೇತ್ರದಿಂದ ಉಷಾರಾಣಿ ಆಲೂರು, ಕ್ರೀಡಾಪಟು ಎಂ.ಎನ್.ಕೀರ್ತಿ, ಸೇವಾಕ್ಷೇತ್ರದಿಂದ ಎಲ್.ಚಂದ್ರಪ್ಪ ಇವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಈ ಕಾಯಕ್ರಮದಲ್ಲಿ ತಹಶೀಲ್ದಾರ್ ಸಿ.ರಾಜೇಶ್ ಕುಮಾರ್, ನಗರಸಭೆ ಅಧ್ಯಕ್ಷರಾದ ಅಜಯ್ ಕುಮಾರ್, ಉಪಾಧ್ಯಕ್ಷೆ ಶ್ರೀಮತಿ ಅಂಬಿಕಾಆರಾಧ್ಯ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಎಂ.ನಾಗೇಶ್, ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ಪೋಲೀಸ್ ಉಪಅಧೀಕ್ಷಕರಾದ ಶಿವಕುಮಾರ್, ರೈತ ಮುಖಂಡರಾದ ಹೊರಕೇರಪ್ಪ, ನಗರಸಭೆ ಮಾಜಿ ಅಧ್ಯಕ್ಷರಾದ ಶ್ರೀಮತಿ ಶಿವರಂಜಿನಿ ಯಾದವ್, ನಗರಸಭೆ ಸದಸ್ಯರುಗಳಾದ ಬಿ.ಎನ್.ಪ್ರಕಾಶ್, ಎಂ.ಡಿ.ಸಣ್ಣಪ್ಪ, ಜಬೀವುಲ್ಲಾ, ರಮೇಶ್ ಬಾಬು, ಅಜೀಂ, ಗಿರೀಶ್, ವಿಠ್ಠಲ್, ಜಗದೀಶ್, ಅನಿಲ್, ಶ್ರೀಮತಿ ರತ್ನಮ್ಮ, ಶ್ರೀಮತಿ ವಿಶಾಲಾಕ್ಷಮ್ಮ, ಶ್ರೀಮತಿ ಕವಿತಾ, ಶ್ರೀಮತಿ ಸುರೇಖಾಮಣಿ, ಶ್ರೀಮತಿ ಮೊದಲಮೇರಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ರಾಮಕೃಷ್ಣಪ್ಪ, ಕಾರ್ಯದರ್ಶಿ ದಾದಾಪೀರ್, ಕನ್ನಡ ಹಿತರಕ್ಷಣಾ ಸೇನೆ ಅಧ್ಯಕ್ಷ ಬಸವರಾಜ್, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸರಸ್ವತಿನಾಗರಾಜ್, ಕರ್ನಾಟಕ ನವನಿರ್ಮಾಣ ಸೇನೆ ಅಧ್ಯಕ್ಷ ಲಕ್ಷ್ಮೀಕಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿರಮೇಶ್, ಮುಖಂಡ ದಿವಾಕರ್ ನಾಯಕ್, ಶಿಕ್ಷಣ ಇಲಾಖೆ ಟಿ.ಪಿ.ಓ ರವೀಂದ್ರನಾಯ್ಕ್, ಇ.ಸಿ.ಓ ಗಳಾದ ಶಿವಾನಂದ್, ಜಾಫರ್, ನಾಗರಾಜ್, ಪುಟ್ಟಸ್ವಾಮಿ, ರಂಗಸ್ವಾಮಿ, ಕಂದಾಯ ಇಲಾಖೆ ಶ್ರೀನಿವಾಸ್ ಮೂರ್ತಿ, ಸ್ವಾಮಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಆರಂಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಕಾರ್ಯಕ್ರಮಕ್ಕೆ ಎಲ್ಲ ಗಣ್ಯರನ್ನು ಸ್ವಾಗತಿಸಿದರು. ಸೇವಾದಳ ಪ್ರತಿನಿಧಿ ಶಶಿಧರ್ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದನಾರ್ಪಣೆಯನ್ನು ನೆರವೇರಿಸಿದರು. ನಗರದ ವಿವಿಧ ಶಾಲೆಗಳಾದ ರಾಷ್ಟ್ರೀಯ ಅಕಾಡೆಮಿ, ಗಂಗಾಸೆಂಟ್ರಲ್ ಸ್ಕೂಲ್, ಗಿರೀಶ ಪ್ರೌಢಶಾಲೆಗಳಿಂದ ಆಕರ್ಷಕ ನೃತ್ಯ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.



About The Author
Discover more from JANADHWANI NEWS
Subscribe to get the latest posts sent to your email.